ಉಡುಪಿ: ಬಸ್ ಚಾಲಕರಿಬ್ಬರಿಗೆ ಚೂರಿ ಇರಿತ

ಉಡುಪಿ: ಬಸ್ ಚಾಲಕರಿಬ್ಬರಿಗೆ ರಿಕ್ಷಾದಲ್ಲಿ ಬಂದ ತಂಡವೊಂದು ಚೂರಿಯಲ್ಲಿ ಇರಿದ ಘಟನೆ ಕಳೆದ ರಾತ್ರಿ ಬನ್ನಂಜೆಯಲ್ಲಿ ನಡೆದಿದೆ.

ಜೆಎಮ್‌ಟಿ ಬಸ್ ಚಾಲಕರಾದ ಸಂತೋಷ ಹಾಗೂ ಶಿಶರ್ ಕೆಲಸ ಮುಗಿಸಿ ಬನ್ನಂಜೆ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಿಕ್ಷಾದಲ್ಲಿ ಬಂದಿದ್ದ ಟಿಮ್‌ಟಿ ಬಸ್‌ನ ಮ್ಯಾನೇಜರ್ ಹಾಗೂ ಚಾಲಕ ಬುರನ್ ಮತ್ತು ಚಾಲಕ ಸುದೀಪ್ ಅಡ್ಡಗಟ್ಟಿ ಚೂರಿ ಇರಿದಿದ್ದಾರೆ ಎಂದು ತಿಳಿದುಬಂದಿದೆ.

ಪರ್ಯಾಯ ದಿನದಂದು ಉಡುಪಿ ಸಿಟಿ ಬಸ್ ಚಾಲಕರ ನಡುವೆ ಗಲಾಟೆ ನಡೆದಿತ್ತು. ಇದರ ವಿಚಾರವಾಗಿ ನಗರ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆಸಿ ಕಳುಹಿಸಲಾಗಿತ್ತು. 

ಬಳಿಕ ರಾತ್ರಿ ಮೂವರಿದ್ದ ತಂಡವು ಈ ಕೃತ್ಯ ಎಸಗಿದ್ದು, ಗಾಯಾಳು ಬಸ್ ಚಾಲಕರು ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿಶಿರ್ ಮೇಲೆ ಸುದೀಪ್ ನೇತೃತ್ವದ ಎಂಟು ಜನರಿದ್ದ ತಂಡವೊಂದು ಕಳೆದ ಎರಡು ವರ್ಷಗಳ ಹಿಂದೆ ಸಿಟಿಬಸ್ ನಿಲ್ದಾಣ ಬಳಿ ಹಲ್ಲೆ ನಡೆಸಿತ್ತು. ಬಸ್ ನಿಲ್ದಾಣದಲ್ಲಿ ಎರಡು ಬಸ್‌ಗಳ ಮಾಲಕ ,ಚಾಲಕರ ನಡುವೆ ಯಾವಾಗಲೂ ಹೊಯೈಕೈ ನಡೆಯುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದ್ದು ಪೊಲೀಸರು ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!