ಜ.26 ರಂದು “ಕೋಳಿ ಎಸ್ರು” ಮತ್ತು “ಹದಿನೇಳೆಂಟು” ಸಿನಿಮಾ ಬಿಡುಗಡೆ

ಮಂಗಳೂರು: ಚಂಪಾ.ಪಿ. ಶೆಟ್ಟಿ ನಿರ್ದೇಶನದ “ಕೋಳಿ ಎಸ್ರು” ಹಾಗೂ ಪೃಥ್ವಿ ಕೊಣನೂರು ನಿರ್ದೇಶಿಸಿರುವ “ಹದಿನೇಳೆಂಟು” ಚಿತ್ರಗಳು ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಹೆಸರು ತಂದು ಕೊಟ್ಟಿರುವಂತಹ ಎರಡು ಚಿತ್ರಗಳು. ಜನವರಿ 26 ರಂದು ಈ ಎರಡೂ ಚಿತ್ರಗಳು ಕರ್ನಾಟಕದಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರಾದ ಚಂಪಾ ಶೆಟ್ಟಿ ಮತ್ತು ಪೃಥ್ವಿ ಕೊಣನೂರು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಂಪಾ ಶೆಟ್ಟಿ ಅವರು ಹಿಂದೆ “ಅಮ್ಮಚ್ಚಿಯೆಂಬ ನೆನಪು” ಚಿತ್ರವನ್ನು, ಪೃಥ್ವಿ ಕೋಣನೂರು ಅವರು “ರೈಲ್ವೇ ಚಿಲ್ಡ್ರನ್” ಹಾಗೂ “ಪಿಂಕಿ ಎಲ್ಲಿ ” ಚಿತ್ರಗಳನ್ನು ನಿರ್ದೇಶಿಸಿದ್ದರು. ‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ ಚಲನಚಿತ್ರಗಳು, “ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “MAMI”, “ಹಾಂಗ್ ಕಾಂಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, , “ಕೇರಳದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “TIFF ಕಿಡ್ಸ್”, “Zlin ಚಲನಚಿತ್ರೋತ್ಸವ”, “ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್” “IFFI ಗೋವಾ”, “ಪ್ರೇಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ “ “ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್” ಮುಂತಾದ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗಿದ್ದು ಮಾತ್ರವಲ್ಲ ಸುಮಾರು 40 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಗೊಂಡು ಸುಮಾರು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿವೆ ಎಂದವರು ತಿಳಿಸಿದರು.

ಕಾ.ತ. ಚಿಕ್ಕಣ್ಣನವರ ಕತೆಯಾಧಾರಿತ “ಕೋಳಿ ಎಸ್ರು” ಚಿತ್ರದ ಕತೆ ಮೈಸೂರಿನ ಗ್ರಾಮೀಣ ಭಾಗದಾಗಿದ್ದು, ಚಿತ್ರದ ಶೂಟಿಂಗ್ ಕೂಡಾ ಟಿ. ನರಸಿಪರದ ಸುತ್ತಮುತ್ತಲೇ ಆಗಿದೆ. ಚಿತ್ರದಲ್ಲಿ ಟಿ ನರಸೀಪುರ, ಚಾಮರಾಜನಗರ ಭಾಷೆಯನ್ನು ಬಳಸಲಾಗಿದೆ. ನೂರಕ್ಕೆ ನೂರು ಭಾಗ ಕಲಾವಿದರು ಮೈಸೂರು ,ಮಂಡ್ಯದಗ್ರಾಮೀಣ ಕಲಾವಿದರೇ ಎಂಬುದು ವಿಶೇಷ.

“ಹದಿನೇಳೆಂಟು” ಚಿತ್ರ ಕಾಲೇಜಿನಲ್ಲಿ ನಡೆಯುವ ಒಂದು ವಿಡಿಯೋ ವೈರಲ್, ಹಾಗೂ ಅದರ ಸುತ್ತ ನಡೆಯುವ ಘಟನೆಗಳನ್ನು ಆಧರಿಸಿದ ಸಿನೆಮಾ. ಇಂದಿ ಮಕ್ಕಳು ಹಾಗೂ ಪೋಷಕರು ನೋಡಲೇ ಬೇಕಾದ ಚಿತ್ರವಾಗಿದೆ.ಎರಡೂ ಚಿತ್ರಗಳ ಟ್ರೈಲರ್ ಗಳು ಪಿ ಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿ ಜನರಿಂದ ಮೆಚ್ಚುಗೆ ಪಡೆದಿದೆ. ಈ ಎರಡೂ ಚಿತ್ರಗಳೂ ಕೇವಲ ಚಿತ್ರೋತ್ಸವಕ್ಕೆ ಸೀಮಿತವಾಗದೆ, ಸಾಮಾನ್ಯ ಪ್ರೇಕ್ಷಕರಿಗೂ ತಲುಪಬೇಕೆಂಬ ಉದ್ದೇಶದಿಂದ
ಎರಡೂ ತಂಡ ಒಟ್ಟಾಗಿ ಸೇರಿ ತಮ್ಮ ಚಿತ್ರಗಳ ಬಿಡುಗಡೆಗೆ ಹೊಸ ಯೋಜನೆ ಹಾಕಿಕೊಂಡಿದೆ.
ಎರಡೂ ತಂಡಗಳೂ ಸೇರಿ ಪರಸ್ಪರ.ಲೈವ್ ಎಂಬ ವೆಬ್ ಸೈಟ್ ಮೂಲಕ ಈಗಾಗಲೇ ಟಿಕೆಟ್ ಕೊಂಡುಕೊಳ್ಳುವ ಯೋಜನೆ ರೂಪಿಸಿಕೊಂಡಿದ್ದು ಅದಕ್ಕೆ ಪ್ರೇಕ್ಷಕರು ಹಾಗೂ ಸಿನಿ ಪ್ರಿಯರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಎಂದು ಪೃಥ್ವಿ ಕೊಣನೂರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೀತಾ ಸುರತ್ಕಲ್, ಅಕ್ಷತಾ ಪಾಂಡವಪುರ, ಪ್ರಕಾಶ್ ಪಿ ಶೆಟ್ಟಿ, ವೇಣುಗೋಪಾಲ್, ಚಂಪಾ ಶೆಟ್ಟಿ, ಪೃಥ್ವಿ ಕೊಣನೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!