ಉಡುಪಿ: ಜೀವ ವೈದ್ಯಕೀಯ ತ್ಯಾಜ್ಯ ವಸ್ತು ನಿರ್ವಹಣೆ -2016 ಜಾಗೃತಿ ಕಾರ್ಯಕ್ರಮ
![](https://udupitimes.com/wp-content/uploads/2024/01/IMG_20240109_145143-1024x500.jpg)
ಉಡುಪಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಹಾಗೂ ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ, ಆಯುಷ್ ಎನ್ವಿರೋಟೆಕ್ ಪ್ರೈ.ಲಿ. ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ” ಜೀವ ವೈವಿದ್ಯ ತ್ಯಾಜ್ಯವಸ್ತು ನಿರ್ವಹಣೆ 2016 ” ಜಾಗೃತಿ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಗಳಾದ ವಿಜಯಾ ಹೆಗ್ಡೆ (ಹಿರಿಯ ಪರಿಸರ ಅಧಿಕಾರಿ ಮಂಗಳೂರು ವಿಭಾಗ) ಇವರು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಮತಾ ಕೆ. ವಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಜೆ.ಚಂದ್ರ ರೀಜನಲ್ ಡೈರೆಕ್ಟರ್ ಬೆಂಗಳೂರು, ಡಾ.ಕೆ.ಎಂ. ರಾಜು ಮುಖ್ಯ ಅಧಿಕಾರಿಗಳು ಕೆ.ಎಸ್.ಪಿ.ಸಿ.ಬಿ. ಉಡುಪಿ, ಹಾಗೂ ಎ. ಎಫ್.ಐ ಉಡುಪಿ ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಸಂಸ್ಥೆಯ ಹೆಚ್.ಐ.ಸಿ. ಮುಖ್ಯಸ್ಥರಾದ ಡಾ. ಪ್ರಸನ್ನ ಎನ್ ಮೊಗಸಾಲೆ, ಆಯುಷ್ ಎನ್ವಿರೋಟೆಕ್ ಇದರ ಮಾರುತಿ ಹೆಗ್ಡೆ ಯವರು ಉಪಸ್ಥಿತರಿದ್ದರು.
ಎಸ್.ಡಿ.ಎಂ ಕಾಲೇಜಿನ ವಿವಿಧ ವೈದ್ಯಕೀಯ ವಿಭಾಗದ ಮುಖ್ಯಸ್ಥರು, ಅಧ್ಯಾಪಕ ವೃಂದದವರು, ಕಾಲೇಜಿನ ಸ್ನಾತಕೋತ್ತರ ವೈದ್ಯ ವಿಧ್ಯಾರ್ಥಿಗಳು, ಎಸ್.ಡಿ.ಎಂ.ಕಾಲೇಜು ಹಾಗೂ ಆಸ್ಪತ್ರೆಯ ವ್ಯವಸ್ಥಾಪಕರು, ಆಸ್ಪತ್ರೆಯ ಹೆಚ್.ಐ.ಸಿ. ವಿಭಾಗದ ಸದಸ್ಯರುಗಳು, ಆಸ್ಪತ್ರೆಯ ಶುಶ್ರೂಷಕಿಯರು, ಸಿಬ್ಬಂದಿ ವರ್ಗ, ಸ್ವಚ್ಛತಾ ಸಿಬ್ಬಂಧಿಗಳು, ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ ಆಯುಷ್ ವೈದ್ಯರುಗಳು, ಆರೋಗ್ಯ ಇಲಾಖೆಯ ಸದಸ್ಯರುಗಳು ಭಾಗವಹಿಸಿದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಡಾ.ಪ್ರಸನ್ನ ಎನ್ ಮೊಗಸಾಲೆಯವರು ನೆರವೇರಿಸಿದರು, ಸಭಾ ಕಾರ್ಯಕ್ರಮದ ನಂತರ ಸುಮಾರು ಒಂದು ಗಂಟೆಗಳ ಕಾಲ ಜೇ.ಸಿ ಚಂದ್ರ ಬೆಂಗಳೂರು ಇವರು “ಜೀವ ವೈದ್ಯಕೀಯ ತ್ಯಾಜ್ಯ ವಸ್ತು ನಿರ್ವಹಣೆ ” ಮಾಹಿತಿ ಕಾರ್ಯಾಗಾರ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯವಾಗಿ ನಮ್ಮ ಪರಿಸರದ ಸುತ್ತಮುತ್ತಲಿನ ವಿವಿಧ ಆರೋಗ್ಯ ಸಂಸ್ಥೆಯ ವ್ಯವಸ್ಥೆಯಡಿ ಉತ್ಪತ್ತಿಯಾಗುವ ಜೀವ ತ್ಯಾಜ್ಯಗಳು, ಸೂಕ್ತ ಸಂಗ್ರಹಣಾ ಕ್ರಮ – ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳು ಮತ್ತು ನಿಯಮಗಳು , ಜೀವ ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯ ವೈಖರಿ, ಸಾಮಾಜಿಕ ಆರೋಗ್ಯದ ಮೇಲೆ ವೃತ್ತಿ ನಿರತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಜವಾಬ್ದಾರಿಗಳು, ಪರಿಸರ ನೈರ್ಮಲ್ಯ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಎಸ್. ಡಿ. ಎಮ್. ಆಯುರ್ವೇದ ಕಾಲೇಜಿನ ಪ್ರಾಂಶಪಾಲರಾದ ಡಾ.ಮಮತಾ ಕೆ.ವಿ. ಇವರ ಅದ್ಯಕ್ಷೀಯ ಭಾಷಣದೊಂದಿಗೆ ಜಾಗೃತಿ ಕಾರ್ಯಕ್ರಮ ಸಮಾಪ್ತಿಗೊಂಡಿತು. ಡಾ.ಸದಾನಂದ ಭಟ್ ಕಾಪು ಇವರು ಧನ್ಯವಾದ ಸಮರ್ಪಣೆಯನ್ನು ನೀಡಿದರು. ಕಾರ್ಯಕ್ರಮ ನಿರ್ವಹಣಾ ಉಸ್ತುವಾರಿಯನ್ನು ಡಾ. ಶ್ರೇಯಶ್ರೀ ಸುವರ್ಣರವರು ವಹಿಸಿದ್ದರು, ಸಹಾಯಕ ವೈದ್ಯರುಗಳಾದ ಪ್ರತಿಭಾ ಹಾಗೂ ಅಸೀರಾ ಕಾರ್ಯಕ್ರಮವನ್ನು ನಿರೂಪಿಸಿದರು.