ನಟ ಯಶ್ ಹುಟ್ಟು ಹಬ್ಬದ ಕಟೌಟ್ ನಿಲ್ಲಿಸಿಲುವ ವೇಳೆ ವಿದ್ಯುತ್ ತಗುಲಿ- ಮೂವರು ಯುವಕರ ಮೃತ್ಯು
![](https://udupitimes.com/wp-content/uploads/2024/01/yash.webp)
ಗದಗ: ಕನ್ನಡ ಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ.
ಮೃತರನ್ನು ಸೂರಣಗಿ ಗ್ರಾಮದ ಹನುಮಂತ ಮಜ್ಜುರಪ್ಪ ಹರಿಜನ (21), ಮುರಳಿ ನೀಲಪ್ಪ ನಡವಿನಮನಿ (20), ನವೀನ ನೀಲಪ್ಪ ಗಾಜಿ(19) ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಲಕ್ಷ್ಮೇಶ್ವರ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂದು ರಾಕಿಂಗ್ ಸ್ಟಾರ್ ಜನ್ಮದಿನವನ್ನು ಆಚರಿಸಲು ಮಾಡಿಕೊಂಡಿದ್ದ ಸೂರಣಗಿ ಗ್ರಾಮದ 10ಕ್ಕೂ ಹೆಚ್ಚು ಯುವಕರು 25 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ವೇಳೆ ಕಟೌಟ್ ವಿದ್ಯುತ್ ತಂತಿ ತಗುಲಿ ದುರ್ಘಟನೆ ಸಂಭವಿಸಿದೆ.