ಮಣಿಪಾಲ: ಹೊಸ ವರ್ಷಾಚರಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ-ವಾಹನ ಸಹಿತ ಹಲವರು ವಶಕ್ಕೆ
![](https://udupitimes.com/wp-content/uploads/2024/01/IMG-20240102-WA0215.jpg)
ಮಣಿಪಾಲ,ಜ.2: ಹೊಸ ವರ್ಷಾಚರಣೆಯ ಸಂದರ್ಭ ರಸ್ತೆಯಲ್ಲಿ ಕುಣಿದು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದಲ್ಲಿ ಹಲವು ಯುವಕರನ್ನು ವಾಹನ ಸಹಿತ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
![](https://udupitimes.com/wp-content/uploads/2024/01/IMG_20240102_231811-764x1024.jpg)
ಡಿ.31ರಂದು ಮಧ್ಯರಾತ್ರಿ ವೇಳೆ ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಕಾಯಿನ್ ಸರ್ಕಲ್ ನಡುವಿನ ವಿ.ಎಸ್.ಆಚಾರ್ಯ ರಸ್ತೆಯಲ್ಲಿ 7 ರಿಂದ 10 ಜನರು ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡಿಕೊಂಡು ಬಂದು ಅಕ್ರಮ ಕೂಟ ಸೇರಿಕೊಂಡಿದ್ದು, ಬುಲೆಟ್ ಸವಾರ ಸೈಲೆನ್ಸರ್ನಲ್ಲಿ ಬೆಂಕಿಯ ಕಿಡಿ ಬರುವ ರೀತಿಯಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡಿದ್ದರು.
ಅದೇ ರೀತಿ ವಿವಿಧ ಸವಾರರರು ರಸ್ತೆಯ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಬೊಬ್ಬೆಯೊಡೆದು ಕುಣಿದು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿರುರುವುದಾಗಿ ದೂರಲಾಗಿದೆ.
ಈ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಮಣಿಪಾಲ ಪೊಲೀಸರು ಯುವಕರನ್ನು ವಾಹನ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.