ನಾರಾಯಣಗುರುಗಳ ಅಧ್ಯಯನ ಪೀಠದ ಅನುಷ್ಠಾನದ ಬಗ್ಗೆ ಸರ್ಕಾರ ಗಮನ ಹರಿಸಲಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿ.10: ನಾರಾಯಣ ಗುರುಗಳ ಅಧ್ಯಯನ ಪೀಠ, ಕೋಟಿ ಚನ್ನಯ್ಯನವರ ಥೀಮ್ ಪಾರ್ಕಿಗೆ ನಮ್ಮ ಸರ್ಕಾರ ಹಿಂದೆ 5 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಯಿತು. ಈ ಪೈಕಿ ಅಧ್ಯಯನ ಪೀಠ ಮಾಡಲಾಗಿಲ್ಲ. ಅದರ ಅನುಷ್ಠಾನದ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅವರು ಇಂದು ಆರ್ಯ ಈಡಿಗ, ಬಿಲ್ಲವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಬೇಡಿಕೆಗಳ ಬಗ್ಗೆ ಸರ್ಕಾರ ಅಗತ್ಯ ಕ್ರಮ: ಹಿಂದುಳಿದ ಜಾತಿಗಳ ಸಂಘಟನೆ, ಶಿಕ್ಷಣ, ಹೋರಾಟದ ಬಗ್ಗೆ ಹಾಗೂ ಈಡಿಗ ಸಮಾಜಕ್ಕೆ ಏನು ಅಗತ್ಯ ಎಂದು ಪ್ರಸ್ತಾಪ ಮಾಡಿದ್ದಾರೆ. ಅನೇಕ ಒತ್ತಾಯ ಬೇಡಿಕೆ ಗಳನ್ನು ಸಲ್ಲಿಸಿದ್ದಾರೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ. ಅಧಿವೇಶನ ಮುಗಿದ ಕೂಡಲೇ ಬಂದು ಕಂಡರೆ ಬೇಡಿಕೆಗಳ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. 1995 ರಲ್ಲಿ ಹಣಕಾಸಿನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಸಮಾವೇಶವನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಅರ್ಥಪೂರ್ಣವಾಗಿ ಆಚರಿಸಿದ್ದರು ಎಂದರು. ಅಂದಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಅವರೂ ಕೂಡ ಭಾಗವಹಿಸಿದ್ದರು ಎಂದು ಸ್ಮರಿಸಿದರು. ಅಂದೂ ಕೂಡ ಬೇಡಿಕೆಗಳನ್ನು ಈಡೇರಿಸಲಾಗಿತ್ತು ಎಂದು ಸ್ಮರಿಸಿದರು.

ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರ ಮಾಡಬೇಕೆಂದು ಒತ್ತಾಯ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಿಸುವಂತೆ ತೀರ್ಮಾನ ಮಾಡಲಾಯಿತು ಎಂದರು.

ನಾರಾಯಣ ಗುರುಗಳ ಅವರ ವಿಚಾರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ: ನಾರಾಯಣ ಗುರುಗಳ ಮಾರ್ಗದರ್ಶನ ಅವಶ್ಯ, ಅವರ ವಿಚಾರಗಳು, ಇಂದಿಗೂ, ಎಂದೆಂದಿಗೂ ಪ್ರಸ್ತುತ. ಕೇರಳದಲ್ಲಿ ಅವಮಾನಗಳನ್ನು ಸಹಿಸಿ ಅದರ ವಿರುದ್ಧ ಸಾತ್ವಿಕ ಕೋಪವಿದ್ದರೂ ಸಹಿಸಿ ಜನರ ಸಂಘಟನೆ ಮಾಡಿ, ಜಾಗೃತಿ ಮೂಡಿಸಲು, ಬದಲಾವಣೆ ತರಲು ಇಡೀ ಬದುಕನ್ನು ಮುಡಿ ಪಾಗಿಟ್ಟರು. ಆರ್ಥಿಕವಾಗಿ, ಸಾಮಾಜಿಕವಾಗಿ ವಂಚಿತರಾಗಿರುವ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದರು. ಮನುಷ್ಯರೆಲ್ಲರೂ ಒಂದೇ, ಜಾತಿ, ಒಂದೇ ಮತ, ಒಂದೇ ದೇವರು ಎಂದು ಹೇಳಿದ್ದರು. ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಮಾಡಿಕೊಂಡಿರುವವರು ನಾವು. ಜಾತಿ ಹೇಳಬೇಡ, ಜಾತಿ ಕೇಳಬೇಡಿ ಹಾಗೂ ಜಾತಿ ನೋಡಬೇಡ ಎಂದು ನಾರಾಯಣ ಗುರುಗಳು ಹೇಳಿದ್ದರು ಎಂದರು.

ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು
ದೇವಸ್ಥಾನದೊಳಗೆ ದೇವರ ದರ್ಶನ ಮಾಡಲು ಶೂದ್ರರಿಗೆ ಅವಕಾಶವಿರಲಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ದೇವರು ಯಾರ ಸ್ವತ್ತಲ್ಲ. ಹಾಗಾಗಿ ನೀವೇ ದೇವಸ್ಥಾನಗಳನ್ನು ಕಟ್ಟಿ ಎಂದು ಕರೆ ನೀಡಿದ್ದರು. ಕೇರಳ, ಕರಾವಳಿಯಲ್ಲಿ ಅನೇಕ ದೇವಸ್ಥಾನ ಕಟ್ಟಿದ್ದರು. ಈಡಿಗರು, ಬಿಲ್ಲವರೇ ಈ ದೇವಾಲಯದ ಪೂಜಾರಿಗಳಾದರು. ಕುವೆಂಪು ಹೇಳಿದಂತೆ ಹುಟ್ಟುವಾಗ ವಿಶ್ವಮಾನವರಾಗಿರುವ ಮನುಷ್ಯರು ನಂತರ ಅಲ್ಪಮಾನವರಾಗುತ್ತಾರೆ. ವಿಶ್ವಮಾನವನಾಗುವ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದರು. ನಾರಾಯಣ ಗುರುಗಳು ವಿಶ್ವ ಮಾನವರಾಗಿದ್ದರು. ಜಾತಿ, ಧರ್ಮಗಳನ್ನು ಮೀರಿ ಬೆಳೆದವರ ಪರಂಪರೆಯಲ್ಲಿ ಕನಕದಾಸರು, ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರುಗಳು ಸೇರುತ್ತಾರೆ. ಮಾನವ ಸಮಾಜ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಮಾನವರು ಒಂದೇ ಜಾತಿ ಎಂದು ಸಾರಿದ್ದರು. ದಯೆಯೇ ಧರ್ಮದ ಮೂಲ ಎಂದರು. ಈ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಅಂಬೇಡ್ಕರ್ ಅವರು ಹೇಳುವಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಅವಕಾಶ ವಂಚಿತರು ಮಾಡಬೇಕು ಎಂದರು.

ಸಮಾಜದಲ್ಲಿ ಬದಲಾವಣೆ ತರಲು ಸರ್ಕಾರ ಶ್ರಮಿಸುತ್ತದೆ: ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಶತಮಾನಗಳ ಕಾಲ ಹಿಂದುಳಿದ , ಶೂದ್ರ ವರ್ಗ ಶಿಕ್ಷಣ ಸಂಸ್ಕೃತಿಯಿಂದ ವಂಚಿತವಾಗಿತ್ತು. ಜಾತಿ ವ್ಯವಸ್ಥಯಲ್ಲಿ ಚಲನೆಯಿಲ್ಲ. ಆರ್ಥಿಕ ಹಾಗೂ ಸಮಾಜಿಕ ಚಲನೆಯಿಲ್ಲದ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಇದಕ್ಕಾಗಿ ಶಿಕ್ಷಣ ಬಹಳ ಮುಖ್ಯ. ನಾರಾಯಣ ಗುರುಗಳು ಶಿಕ್ಷಣಕ್ಕೆ ಒತ್ತು ನೀಡಿದ್ದರು. ಶಿಕ್ಷಣದಿಂದ ತುಳಿತಕ್ಕೊಳಗಾದವರು ಸ್ವಾಭಿಮಾನಿ, ಸಶಕ್ತರಾಗಿ ಜೀವನ ನಡೆಸಲು ಸಾಧ್ಯ.ಆದರೆ ವೈಚಾರಿಕ ಚಿಂತನೆಯ ಗುಣಮಟ್ಟ ಶಿಕ್ಷಣದ ಕೊರತೆ ಇದೆ. ಬಸವಣ್ಣ, ಕನಕದಾಸರು, ನಾರಾಯಣಗುರುಗಳು ಸೇರಿದಂತೆ ಎಲ್ಲ ಮಹನೀಯರ ಆಶಯದಂತೆ ಸಮಾಜದಲ್ಲಿ ಸಮಾನತೆ ಬರಬೇಕು. ಶಿಕ್ಷಣದ ಮೂಲಕ ಆರ್ಥಿಕ, ಸಾಮಾಜಿಕ ಬದಲಾವಣೆ ಬರಬೇಕು ಎಂದರು.

ಸಮಾಜ ಪರಿವರ್ತಕರಾದ ನಾರಾಯಣ ಗುರುಗಳು:

1856 ರಲ್ಲಿ ಹುಟ್ಟಿದ ನಾರಾಯಣ ಗುರುಗಳು ಸಣ್ಣ ವಯಸ್ಸಿನಲ್ಲಿ ಅನೇಕ ಅವಮಾನಗಳನ್ನು ಅನುಭವಿಸಿ, ಸಮಾಜದ ಸುಧಾರಣೆಗಾಗಿ ಸಮಾಜದ ಪರಿವರ್ತಕರಾದರು. ಸಮಾಜದಲ್ಲಿನ ಅಸಮಾನತೆ ಯಿಂದ ನೊಂದ ಜನ ಪ್ರಜಾಪ್ರಭುತ್ವದ ಸೌಧವನ್ನು ನಾಶ ಮಾಡುವ ಸಾಧ್ಯತೆಯಿದೆಯೆಂದು ಡಾ. ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು. ಸಮಾಜದಲ್ಲಿ ಬದಲಾವಣೆ ತರಲು ಸರ್ಕಾರ ಪ್ರಯತ್ನಿಸುವ ಹಾದಿಯಲ್ಲಿವೆ ಎಂದರು.

ಸಮಾಜದ ಋಣವನ್ನು ತೀರಿಸುವುದು ಎಲ್ಲರ ಕರ್ತವ್ಯ:

ದೊಡ್ಡ ಇತಿಹಾಸವಿರುವ ಈಡಿಗ ಸಮುದಾಯ ಹೆಮ್ಮೆ ಪಡಬೇಕು. ಸಮುದಾಯದವರು ಸಮಾಜ ಸುಧಾರಕರು ನುಡಿದ ದಾರಿಯಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಬಹಳ ಮುಖ್ಯ. ಸಂವಿಧಾನ ನೀಡಿದ ಹಕ್ಕುಗಳನ್ನು ಪಡೆದುಕೊಳ್ಳಲು ಜಾಗೃತರಾಗ ಬೇಕು. ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಚಿಂತನೆ ನಡೆಸಲು ಇಂತಹ ಸಮಾವೇಶಗಳು ಅತ್ಯವಶ್ಯ. ಸಮಾಜದಿಂದಾಗಿ ಏಳಿಗೆ ಹೊಂದಿದವರು ಸಮಾಜದ ಋಣವನ್ನು ತೀರಿಸಬೇಕು ಎಂದರು.

ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೆಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಖ್ಯಾತ ನಟ ಶಿವರಾಜ್ ಕುಮಾರ್, ಶಾಸಕರು, ಮಾಜಿ ಸಚಿವರು, ಶಾಸಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!