ಅಂಬೇಡ್ಕರ್ ಶೋಷಿತರ ಬೆಳಕು: ಸುಂದರ ಮಾಸ್ತರ್

ಉಡುಪಿ: ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ದಲಿತ ವರ್ಗದ ವರಿಗಷ್ಟೇ ಮಾತ್ರವಲ್ಲ ದೇಶದ ಮಹಿಳೆಯರಿಗೆ, ಕಾರ್ಮಿಕರಿಗೆ, ರೈತರಿಗೆ, ಸಮಸ್ತ ಶೋಷಿತ ವರ್ಗದವರಿಗೆ ಬೆಳಕಾಗಿದ್ದಾರೆ. ಬಾಬಾಸಾಹೇಬರ ಪರಿನಿಬ್ಬಾಣವು ಶೋಷಿತ ವರ್ಗದವರ ಪಾಲಿಗೆ ಕಗ್ಗತ್ತಲು ಆವರಿಸಿದಂತೆ ಆಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಶಾಖೆ ಉಡುಪಿ ವತಿಯಿಂದ ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ 67ನೇ ಪರಿನಿಬ್ಬಾಣ ದಿದ ಗೌರವ ನಮನ ಸಲ್ಲಿಸಿ ಅವರು ಮಾತನಾಡುತಿದ್ದರು.

ಅಂಬೇಡ್ಕರ್‌ರವರ ಆಶಯವನ್ನು ಈಡೇರಿಸುವುದೇ ನಾವು ಅವರಿಗೆ ಸಲ್ಲಿಸುವ ಮಹೋನ್ನತ ಗೌರವ. ಈ ದೇಶದ ಶೋಷಿತ ವರ್ಗದವರು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮುಂದಿನ ಪೀಳಿಗೆಗೂ ಕಾಪಾಡಿ ಕೊಂಡು ಬರುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಉಪ್ಪೂರು ಮಾತನಾಡಿ, ಅಂಬೇಡ್ಕರ್ ಆಶಿಸಿದ ರಾಜಕೀಯ ಅಧಿಕಾರವನ್ನು ನಾವು ಹಿಡಿಯಬೇಕು. ಆ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವಾದ ಭೀಮ ರಾಜ್ಯದ ಉದಯವಾಗಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ದಸಂಸ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ರೀಧರ್ ಕುಂಜಿಬೆಟ್ಟು, ಅಕ್ಕಣಿ ಟೀಚರ್, ವಿಜಯ ಗಿಳಿಯಾರು, ಶಿವಾನಂದ ಮೂಡುಬೆಟ್ಟು, ಜಾನಕಿ ಶಂಕರ್‌ದಾಸ್, ಶಾಂತ ಮೂಡುಬೆಟ್ಟು, ಮೋಹನ ಮೂಡುಬೆಟ್ಟು, ಶಿವಕುಮಾರ್ ಪರ್ಕಳ, ನಾರಾಯಣ ಪರ್ಕಳ, ಕಮಲಾಕ್ಷ ಚೇರ್ಕಾಡಿ ಉಪಸ್ಥಿತರಿದ್ದರು. ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಶಿವಾನಂದ ಮೂಡುಬೆಟ್ಟು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!