ನ.30-ಡಿ.2ರವರೆಗೆ ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನ
![](https://udupitimes.com/wp-content/uploads/2023/11/Screenshot_2023-11-28-10-28-13-83_99c04817c0de5652397fc8b56c3b3817-1024x526.jpg)
ಉಡುಪಿ, ನ.28: ಸ್ವಸ್ಥ ಸಮಾಜ ನಿರ್ಮಾಣದ ಗುರಿಯೊಂದಿಗೆ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆಯುವ ಬಡಮಕ್ಕಳಿಗೆ ಮುಂಬೈಯ ಗ್ರೀನ್ಸೋಲ್ ಸಂಸ್ಥೆಯು ಪಾದರಕ್ಷೆಯನ್ನು ಉಚಿತವಾಗಿ ತಯಾರಿಸಿ ಒದಗಿಸುತ್ತಿದ್ದು, ಈ ಸಂಸ್ಥೆಗೆ ಕಚ್ಚಾ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನವನ್ನು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ಎಂಬ ಶೀರ್ಷಿಕೆಯಲ್ಲಿ ನ.30ರಿಂದ ಡಿ.2ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ಈ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ತಾವು ಬಳಸಿದ ಸುಸ್ಥಿತಿಯಲ್ಲಿರುವ ಪಾದರಕ್ಷೆ ಗಳನ್ನು ದಾನ ರೂಪದಲ್ಲಿ ನೀಡಬಹುದು. ಹೀಗೆ ಮೂರು ದಿನಗಳ ಕಾಲ ಸುಮಾರು 5-6ಸಾವಿರ ಪಾದರಕ್ಷೆ ಸಂಗ್ರಹಿಸುವ ಗುರಿ ಹೊಂದ ಲಾಗಿದೆ ಎಂದು ಅಭಿಯಾನದ ರೂವಾರಿ ಅವಿನಾಶ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ್ದಾರೆ.
![](httpss://udupitimes.com/wp-content/uploads/2023/11/Screenshot_2023-11-28-10-28-59-42_99c04817c0de5652397fc8b56c3b3817-1024x433.jpg)
ಗ್ರಿನ್ಸೋಲ್ ಫೌಂಡೇಶನ್: ಮ್ಯಾರಥಾನ್ ಓಟಗಾರರಾಗಿರುವ ರಮೇಶ್ ಧಾಮಿ ಮತ್ತು ಶ್ರೀಯಾನ್ಸ್ ಭಂಡಾರಿ ಜೊತೆ ಯಾಗಿ 2017ರಲ್ಲಿ ಗ್ರೀನ್ಸೋಲ್ ಫೌಂಡೇಶನ್ ಸ್ಥಾಪಿಸಿದ್ದು, ಹಳೆಯ ಪಾದರಕ್ಷೆಗಳಿಂದ ಹೊಸ ಆರಾಮದಾಯಕ ಚಪ್ಪಲಿ ಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ ಮತ್ತು ಪಾದರಕ್ಷೆ ರಹಿತರಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಇವರು ತಯಾರಿಸುವ ಚಪ್ಪಲಿಗಳು ಪರಿಸರ ಸ್ನೇಹಿಯಾಗಿದ್ದು, ಎಂಟು ತಿಂಗಳು ಕಾಲ ವ್ಯಾಲಿಡಿಟಿ ಹೊಂದಿದೆ. ಕಳೆದ ಆರು ವರ್ಷಗಳಿಂದ ಯಶಸ್ವಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಗ್ರೀನ್ಸೋಲ್ ಸಂಸ್ಥೆಯು ಈವರೆಗೆ 6ಲಕ್ಷಕ್ಕೂ ಅಧಿಕ ಪಾದರಕ್ಷೆ ಗಳನ್ನು ನೀಡಿದೆ.
ಹಾಜಿ ಅಬ್ದುಲ್ಲಾ ವೇದಿಕೆ: ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈಕಾರ್ಯಕ್ರಮದ ಉದ್ಘಾಟನೆಯು ನ.30ರಂದು ಬೆಳಗ್ಗೆ 9.15ಕ್ಕೆ ನಡೆಯಲಿದೆ. ಅಭಿಯಾನಕ್ಕೆ ಪರಿಸರವಾದಿ ದಿನೇಶ್ ಹೊಳ್ಳ ಚಾಲನೆ ನೀಡಲಿ ರುವರು ಎಂದು ಅವರು ತಿಳಿಸಿದರು.
ಪಾದರಕ್ಷೆಗಳನ್ನು ದಾನ ರೂಪದಲ್ಲಿ ನೀಡುವ ಈ ಕಾರ್ಯಕ್ರಮದ ವೇದಿಕೆಗೆ ಉಡುಪಿಯ ದಾನಿ ದಿ. ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹೆಸರು ಇಡಲಾಗಿದೆ. ಈ ಮೂಲಕ ಅವರ ಹೆಸರನ್ನು ಸ್ಮರಿಸಲಾಗುವುದು ಎಂದು ಅವಿನಾಶ್ ಕಾಮತ್ ಹೇಳಿದರು.
ಡಿ.3ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಗ್ರೀನ್ಸೋಲ್ ಸಂಸ್ಥೆಯ ಸಂಸ್ಥಾಪಕ ರಮೇಶ್ ಧಾಮಿ ಮತ್ತು ಶ್ರೀಯಾನ್ಸ್ ಭಂಡಾರಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಉಡುಪಿಯ ಆಯ್ದ 75 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗ್ರೀನ್ಸೋಲ್ ಫೌಂಡೇಶನ್ ಹಳೆಯ ಬಟ್ಟೆಗಳಿಂದ ತಯಾರಿಸುವ ಬ್ಯಾಗ್, ಕುಳಿತುಕೊಳ್ಳಲು ಬಳಸುವ ಮ್ಯಾಟ್ ಮತ್ತು ಹಳೆಯ ಪಾದರಕ್ಷೆಗಳಿಂದ ತಯಾರಿಸಿದ ಹೊಸ ಪಾದರಕ್ಷೆಗಳನ್ನು ವಿತರಿಸಲಾಗುವುದು.
ಭಂಡಾರಿ-ಧಾಮಿ ಮಾತುಕತೆ: ರಮೇಶ್ ಧಾಮಿ ಮತ್ತು ಶ್ರಿಯಾನ್ಸ್ ಭಂಡಾರಿ ಜೊತೆಗೆ ಸಂವಾದ ಕಾರ್ಯಕ್ರಮ ವನ್ನು ಉಡುಪಿ ಮಿಷನ್ ಕಂಪೌಂಡ್ನಲ್ಲಿರುವ ಜಗನ್ನಾಥ ಸಭಾಭವನದಲ್ಲಿ ಡಿ.4ರಂದು ಸಂಜೆ 4.30ರಿಂದ ನಡೆಯಲಿದೆ.
ಡಿ.5ರಂದು ಮೂರು ದಿನಗಳ ಕಾಲ ಸಂಗ್ರಹಿಸಿದ ಪಾದರಕ್ಷೆಗಳನ್ನು ಮುಂಬೈಗೆ ಕಳುಹಿಸಿಕೊಡಲಾಗುವು ದು. ದಾನ ಮಾಡಿದವರು ಸೆಲ್ಫಿ ತೆಗೆಯುವ ವ್ಯವಸ್ಥೆ ಯನ್ನು ಕೂಡ ಈ ಅಭಿಯಾನದಲ್ಲಿ ಮಾಡಲಾಗಿದ್ದು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾಗಿದೆ. ಈ ಅಭಿಯಾನಕ್ಕಾಗಿ 50ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಗೈಲ್ ಎಸ್.ಅಂಚನ್, ರವಿರಾಜ್ ಎಚ್.ಪಿ., ಸುಚಿತ್ ಕೋಟ್ಯಾನ್, ಪವಿತ್ರಾ ಉಪಸ್ಥಿತರಿದ್ದರು.
ಯಾವ ಪಾದರಕ್ಷೆ ನೀಡಬಹುದು?
ಸೋಲ್ ಸವೆದ ಚಪ್ಪಲಿ, ಶೂಗಳು, ಹೀಲ್ಸ್, ಪಾಯಿಟೆಂಡ್ ಹೀಲ್ಸ್ ಮತ್ತು 10ವರ್ಷದೊಳಗಿನ ಮಕ್ಕಳ ಪಾದರಕ್ಷೆಗಳನ್ನು ಈ ಅಭಿಯಾನದಲ್ಲಿ ಸ್ವೀಕರಿಸು ವುದಿಲ್ಲ. ಉಳಿದಂತೆ ಪಾರ್ಮಲ್ ಶೂಗಳು, ಸ್ಪೋರ್ಟ್ಸ್ ಶೂಗಳು, ಸ್ಯಾಂಡಲ್ಸ್, ಸ್ಲಿಪ್ಪರ್ಸ್, ರಬ್ಬರ್ ಶೂಗಳು ಹೀಗೆ ಎಲ್ಲ ರೀತಿಯ ಪಾದರಕ್ಷೆಗಳನ್ನು ನೀಡ ಬಹುದಾಗಿದೆ ಎಂದು ಅವಿನಾಶ್ ಕಾಮತ್ ತಿಳಿಸಿದರು.
ನಾವು ಇಲ್ಲಿಂದ ದಾನ ರೂಪದಲ್ಲಿ ನೀಡಿದ ಕಚ್ಚಾ ವಸ್ತುಗಳಿಗೆ ಎಷ್ಟು ಚಪ್ಪಲಿ ಗಳನ್ನು ತಯಾರಿಸಿ ಮಕ್ಕಳಿಗೆ ವಿತರಿಸಲಾಗಿದೆ ಎಂಬ ವರದಿಯನ್ನು ಗ್ರೀನ್ ಸೋಲ್ ಸಂಸ್ಥೆ ನಮಗೆ ಮುಂದೆ ನೀಡುತ್ತದೆ. ಇಲ್ಲಿ ಎಲ್ಲವೂ ಪಾರದರ್ಶಕವಾಗಿ ರುತ್ತದೆ. ಮಂಗಳೂರು, ಕುಂದಾಪುರ, ಕಾರ್ಕಳ ಸೇರಿದಂತೆ ವಿವಿಧ ಸಂಘಸಂಸ್ಥೆ ಗಳು ಹಾಗೂ ಆಸಕ್ತರು ಪಾದರಕ್ಷೆ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
‘ಮನೆಯಲ್ಲಿದ್ದ ಹಳೆಯ ಪಾದರಕ್ಷೆಗಳನ್ನು ದಾನ ಮಾಡುವುದರಿಂದ ಮನೆ ಶುಚಿಯಾಗುತ್ತದೆ, ದಾನ ಮಾಡಿದ ತೃಪ್ತಿ ಸಿಗು ತ್ತದೆ ಮತ್ತು ಪಾದರಕ್ಷೆಯನ್ನು ತ್ಯಾಜ್ಯವನ್ನಾಗಿಸದೆ ಪರಿಸರಪ್ರೇಮಿಗಳಾಗಬಹುದಾಗಿದೆ ಈ ಅಭಿಯಾನದಲ್ಲಿ ಸುಮಾರು 20-25 ಸಂಘಸಂಸ್ಥೆಗಳು ಮತ್ತು ವ್ಯಕ್ತಿಗಳು ಕೈಜೋಡಿಸಿದ್ದಾರೆ’
–ಅವಿನಾಶ್ ಕಾಮತ್, ಅಭಿಯಾನದ ರೂವಾರಿ