ಉಡುಪಿ: ಅ.29 ರಂದು ಕೆಸಿಸಿಸಿಐ ಪ್ರೇರಣಾ ಪ್ರಶಸ್ತಿ-2023 ಪ್ರದಾನ
ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ಉಡುಪಿ ಇದರ ವತಿಯಿಂದ ಕ್ರೈಸ್ತ ಉದ್ಯಮಿಗಳಿಗೆ ಪ್ರೇರಣಾ ಪ್ರಶಸ್ತಿ ವಿತರಣಾ ಸಮಾರಂಭ ಅ. 29 ರಂದು ಕಡಿಯಾಳಿ ಮಾಂಡವಿ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಸ್ಥಾಪಕಾಧ್ಯಕ್ಷ ಡಾ. ಜೆರಿ ವಿನ್ಸೆಂಟ್ ಡಾಯಸ್ ಹೇಳಿದರು.
ಅವರು ಇಂದು ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2000 ಇಸವಿಯಲ್ಲಿ ಪ್ರಾರಂಭಗೊಂಡು 12ನೆ ವರ್ಷಕ್ಕೆ ಪಾದಾರ್ಪಣೆ ಗೊಂಡ ಈ ಸಂಘಟನೆ (KCCCI) ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ (IFKCA) ಇಲ್ಲಾ ಇದರ ಕರ್ನಾಟಕ ರಾಜ್ಯ ಸ್ಥಾಪಕಾಧ್ಯಕ್ಷರಾಗಿದ್ದ ಅನಿವಾಸಿ ಉದ್ಯಮಿ, ಸನ್ಮಾನ್ಯ ಡಾ| ರೊನಾಲ್ಡ್ ಕೊಲಾಸೊ ಇವರ ಕನಸಿನ ಕೂಸು ಹಾಗೂ ಅದನ್ನು ಪ್ರಾಯೋಜಿಸಿದ ಇಫ್ಕಾ ಸಂಘಟನೆಯ ಅಂದಿನ ಜಿಲ್ಲಾಧ್ಯಕ್ಷ ಲೂವಿಸ್ ಲೋಬೊ ಇವರ ಮುಂದಾಳತ್ವ ದಲ್ಲಿ ಆಲ್ವಿನ್ ಕ್ವಾಡ್ರಸ್, ಜಿತೇಂದ್ರ ಫುರ್ಟಾಡೋ, ಡಾ| ನೇರಿ ಕರ್ನೇಲಿಯೊ, ಪ್ರಶಾಂತ್ ಜತ್ತನ, ಸಂತೋಷ್ ಡಿ’ಸಿಲ್ವ ಹಾಗೂ ದಿ| ರಾಬರ್ಟ್ ಫುರ್ಟಾಡೊ ಇವರುಗಳ ಸಹಭಾಗಿತ್ವದಲ್ಲಿ ಸನ್ಮಾನ್ಯ ಡಾ| ಜೆರಿ ವಿನ್ಸೆಂಟ್ ಡಾಯಸ್, ಇವರ ಘನ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು.

ಈ ಸಂಘಟನೆಯನ್ನು ಸಹಕಾರಿ ಸೊಸೈಟಿ: ಕಾಯ್ದೆ 1860ರ ಅಡಿಯಲ್ಲಿ ನೊಂದಾವಣೆಗೊಂಡು ಮಾಂಡವಿ ಕೋರ್ಟ್ ಕಾಂಪ್ಲೆಕ್ಸ್ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.
ಈ ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಒಳಗೊಂಡಿದ್ದರೂ ಸದ್ಯಕ್ಕೆ ಇದರ ಕಾರ್ಯವ್ಯಾಪ್ತಿಯನ್ನು, ಉಡುಪಿ ಜಿಲ್ಲೆಗೇನೇ ಸೀಮಿತಗೊಳಿಸಿದ್ದೇವೆ. ಕ್ರೈಸ್ತ ಸಮಾಜದ ಎಲ್ಲಾ ವರ್ಗಗಳನ್ನು (ಕೆಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್ ಒರ್ಟೊಡೊಕ್ ಹಾಗೂ ಇನ್ನಿತರ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ಪ್ರೊಫೆಶನಲ್ಸ್ ಹಾಗೂ ಕೃಷಿಕರ ಸದಸ್ಯರಾಗಿರುತ್ತಾರೆ. ಅಂದು ಕೇವಲ 30 ಜನರಿಂದ ಪ್ರಾರಂಭಗೊಂಡ ಈ ಸಂಸ್ಥೆ ಇಂದು ನೂರರ ಗಡಿ ದಾಟಿದೆ ಎಂದು ಹೇಳಿದರು.
ಕಳೆದ 11 ವರ್ಷಗಳಲ್ಲಿ ಈ ಸಂಸ್ಥೆ ತನ್ನ ಸದಸ್ಯರಿಗೆ ಉದ್ಯಮ ಶೀಲ ಶಿಬಿರಗಳು, ಕಾರ್ಯಾಗಾರಗಳು ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ಜಿ.ಎಸ್.ಟಿ./ಆದಾಯ ತೆರಿಗೆ, ಕೇಂದ್ರ ಹಾಗೂ ರಾಜ್ಯ ಬಜೆಟ್ ವಿಚಾರ ವಿನಿಮಯ ಹಾಗೂ ಇನ್ನಿತರ ಕಾನೂನು ಮಾಹಿತಿಗಳನ್ನು ನಡೆಸುತ್ತಾ ಬಂದಿದೆ. ನಾವು ಇದುವರೆಗೆ ನಮ್ಮ ಸಮಾಜದ ಉದ್ಯಮಿಗಳನ್ನು ಗುರುತಿಸಿ ಸನ್ಮಾನಿಸಿದರೂ, ಪ್ರಶಸ್ತಿ ಕೊಟ್ಟು ಗೌರವಿಸಿರಲಿಲ್ಲ. ಆ ನ್ಯೂನತೆಯನ್ನು ಸರಿಪಡಿಸಿ, ಪ್ರೇರಣಾ ಪ್ರಶಸ್ತಿ ಪ್ರಮುಖ ನಾಲ್ಕು ಆಯ್ದ ವಿಭಾಗಗಳಲ್ಲಿ ಕೊಡಲು ನಿರ್ಧರಿಸಿದ್ದು, ಈ ವರ್ಷದಿಂದ ಪ್ರಾರಂಭಿಸಿದ್ದೇವೆ. ಅರ್ಹ ವಿಜೇತರನ್ನು ಗುರುತಿಸಲು ಉಪಸಮಿತಿಗಳನ್ನು ರಚಿಸಿ ಈ ಕೆಳಗಿನ ಉದ್ಯಮಿಗಳನ್ನು ಪ್ರೇರಣಾ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದರು.
KCCCI ಪ್ರೇರಣಾ ವಿಶೇಷ ಪ್ರಶಸ್ತಿ 2023
1. ಡೇವಿಡ್ ವಿ. ಸಿಕ್ವೆರಾ ಕೋಟೇಶ್ವರ, ಕು೦ದಾಪುರ, ಸಮಾಜ ಸೇವೆ ಹಾಗೂ ಆರೋಗ್ಯ ಕ್ಷೇತ್ರ
2. ಗ್ಲೆನ್ ಲಾರ್ಸನ್ ರೆಬೆಲ್ಲೊ ಮೂಡುಬೆಳ್ಳೆ ವಿದ್ಯಾರ್ಥಿ ಹಾಗೂ ಯುವ ಉದ್ಯಮಿ ಡ್ರೋನ್ ತಂತ್ರಜ್ಞಾನ ಪರಿಣಿತ
3. ಲಾರೆನ್ಸ್ ಆಳ್ವ ಮೂಡುಬೆಳೆ, ಉಡುಪಿ ಜಿಲ್ಲೆ ಹಡಿಲು ಭೂಮಿ ಕೃಷಿ ಸಾಧಕ ಹಾಗೂ ಸಮಾಜ ಸೇವೆ
KCCCI ಪ್ರೇರಣಾ ಸೇವಾ ಪ್ರಶಸ್ತಿ 2023
1. ಮ್ಯೂರಿಯಲ್ ಪ್ರೇಮಲತಾ, ಉಡುಪಿ (ಶಿಕ್ಷಕರ ಕ್ಷೇತ್ರ)
2. ರುಫಿನಾ ಮೆಂಡೋನ್ಸಾ, ಪಲಿಮಾರು, ಪಡುಬಿದ್ರಿ (ನರ್ಸಿಂಗ್ ಕ್ಷೇತ್ರ)
KCCCI ಪ್ರೇರಣಾ ಪುರಸ್ಕಾರ 2023
ಸಂಘದ ಸದಸ್ಯರ ಮಕ್ಕಳು ಶಿಕ್ಷಣ, ಸಂಗೀತ, ಕ್ರೀಡೆ ಹಾಗೂ ಇತರೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸುವ ಉದ್ದೇಶಕ್ಕಾಗಿ ಪುರಸ್ಕಾರ ನೀಡಲಾಗುತ್ತದೆ ಎಂದರು.
ಈ ಪ್ರಶಸ್ತಿಗಳನ್ನು ಅವರ ಉಪಸ್ಥಿತಿಯಲ್ಲಿ ಈ ತಿಂಗಳ ಭಾನುವಾರ 29 ರಂದು “ಮಾಂಡವಿ ಸಭಾಭವನ” ಕಡಿಯಾಳಿ ಇಲ್ಲಿ ಸನ್ಮಾನ್ಯ ಡಾ. ಜೆರಿ ವಿನ್ಸೆಂಟ್ ಡಾಯಸ್, ಸ್ಥಾಪಕಾಧ್ಯಕ್ಷರು, KCCCI ಹಾಗೂ ಡಾ. ಸುಶೀಲ್ ಜತ್ತನ್ನ, ನಿರ್ದೇಶಕರು, ಲೊಂಬಾರ್ಡ್ ಮಿಶನ್ ಹಾಸ್ಪಿಟಲ್ ಇವರುಗಳ ಘನ ಉಪಸ್ಥಿತಿಯಲ್ಲಿ ನೀಡಲಾಗುವುದು. ಈ ಸಮಾರಂಭವು ಸಂಜೆ 6 ಗಂಟೆಗೆ ಸಂಘದ ಸಾಮಾನ್ಯ ಸಭೆಯೊಂದಿಗೆ ಪ್ರಾರಂಭವಾಗಿ, ಪ್ರಶಸ್ತಿ ವಿತರಣೆ ಜೊತೆಗೆ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಸಿಸಿಸಿಐ ಅಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಪದಾಧಿಕಾರಿಗಳಾದ ಜಿತೇಂದ್ರ ಫುರ್ಟಾಡೊ, ಲೂಯಿಸ್ ಲೋಬೊ ಉಪಸ್ಥಿತರಿದ್ದರು.





