ಕಪ್ಪು ಹಣ ತರುವಲ್ಲಿ ಪ್ರಧಾನಿ ಮೋದಿ ವಿಫಲ: ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಬೆಂಗಳೂರು: ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಭಾನುವಾರ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ವಿರಾಟ್ ಹಿಂದೂಸ್ತಾನ್ ಸಂಘಟನೆ ಆಯೋಜಿಸಿದ್ದ ಅಯ್ಯರ್ ಮತ್ತು ಜಗದೀಶ್ ಶೆಟ್ಟಿ ರಚಿತ ‘ಪೇಪರ್ ಇನ್ ಮನಿ ಔಟ್’ ಎಂಬ ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡಿದರು.

ಹಲವು ರಾಷ್ಟ್ರಗಳು ವಿಶ್ವಸಂಸ್ಥೆಯ ಮೂಲಕ ತಮ್ಮ ರಾಜಕಾರಣಿಗಳು ವಿದೇಶಿ ಬ್ಯಾಂಕ್‌ಗಳಲ್ಲಿ ಹೊಂದಿದ್ದ ಕಪ್ಪು ಹಣವನ್ನು ವಾಪಾಸ್ ತಂದಿವೆ. ಇದೇ ಮಾರ್ಗ ಅನುಸರಿಸುವಂತೆ ನಾನು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದೆ. ಆದರೆ, ಅವರು ಕಪ್ಪು ಹಣ ತರಲು ಉತ್ಸಾಹ ತೋರಲಿಲ್ಲ. ಸೋನಿಯಾ ಗಾಂಧಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ಮೋದಿ ಅವರು ಹೆದರುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಆರ್ಥಿಕ ಸಚಿವಾಲಯ ಪ್ರಧಾನ ಮಂತ್ರಿ ಕಚೇರಿಯ ನಿರ್ದೇಶನಗಳಂತೆ ಕಾರ್ಯ ನಿರ್ವಹಿಸುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇಲಾಖೆಯ ಮೇಲೆ ಹಿಡಿತ ಇಲ್ಲವಾಗಿದೆ. ಇಡೀ ಸಚಿವಾಲಯವನ್ನು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ಮುನ್ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ಲೇಖಕರು ಪುಸ್ತಕವನ್ನು ಮೋದಿಗೆ ಕಳುಹಿಸಬೇಕು. ಇದರಿಂದ ದೇಶವನ್ನು ಉತ್ತಮ ಆರ್ಥಿಕ ಹಾದಿಯಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಆದಾಯ ತೆರಿಗೆ ರದ್ದುಗೊಳಿಸಿ
ಆದಾಯ ತೆರಿಗೆ ಪದ್ಧತಿಯಿಂದ ದೇಶದ ಮಧ್ಯಮ ವರ್ಗ ಮತ್ತು ಸಂಬಳ ಆಧರಿಸಿ ಜೀವನ ನಡೆಸುವ ಕುಟುಂಬಗಳಿಗೆ ಹೊರೆಯಾಗುತ್ತಿದೆ. ಆದಾಯ ತೆರಿಗೆ ಪದ್ಧತಿಯನ್ನು ರದ್ದುಪಡಿಸಿ, ಮಾರುಕಟ್ಟೆ ಆಧಾರಿತ ಆರ್ಥಿಕತೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!