ಹೆಬ್ರಿ: ಬಸ್-ಕಾರು ಮುಖಾಮುಖಿ ಡಿಕ್ಕಿ, ಶಿಕ್ಷಣ ಇಲಾಖಾ ಸಿಬ್ಬಂದಿ ಸಹಿತ ಇಬ್ಬರ ಮೃತ್ಯು
ಹೆಬ್ರಿ, ಜೂ.11: ಬಸ್ಸೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಹೆಬ್ರಿ – ಆಗುಂಬೆ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಸೋಮೇಶ್ವರ ಬಳಿ ಸೀತಾನದಿ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೊದಲ ದರ್ಜೆ ಸಹಾಯಕ ಸುಬ್ರಹ್ಮಣ್ಯ ಗಾಣಿಗ ಹಾಗೂ ಉಡುಪಿಯ ಇಂದಿರ ನಗರ ಶಾಲೆಯ ದೈಹಿಕ ಶಿಕ್ಷಕ ಸೋಮಶೇಖರ್ ಎಂದು ಗುರುತಿಸಲಾಗಿದೆ.
ದಾವಣಗೆರೆಯಲ್ಲಿ ಮದುವೆ ಮುಗಿಸಿ ವಾಪಾಸ್ಸು ಬರುತ್ತಿರುವಾಗ ಉಡುಪಿ ಕಡೆಯಿಂದ ಆಗುಂಬೆ ಕಡೆಗೆ ಹೋಗುತ್ತಿದ್ದ ಮಿನಿ ಬಸ್ ಮುಖಾ ಮುಖಿ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಪರಿಣಾಮ ಕಾರಿನಲ್ಲಿದ್ದ ಇವರಿಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಹೆಬ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.