7ನೇ ವೇತನ ಆಯೋಗ ಜಾರಿಗೆ ಮಧ್ಯಂತರ ವರದಿ ಪಡೆದು ಅನುಷ್ಠಾನ- ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: 7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅನುಷ್ಠಾನ ಮಾಡಲಾಗುವುದು. ಬಜೆಟ್ ನಲ್ಲಿ ಅದಕ್ಕಾಗಿ ಹಣವನ್ನೂ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾಳೆಯಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಸಲು ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ಮಧ್ಯಂತರ ವರದಿ ಪಡೆದು ವೇತನ ಪರಿಷ್ಕರಣೆ ಮಾಡಬೇಕೆಂಬ ಸರ್ಕಾರಿ ನೌಕರರ ಬೇಡಿಕೆಯನ್ನು ಸರ್ಕಾರ ಒಪ್ಪಿದೆ. ನಾವು ಕೂಡಲೇ 7ನೇ ಆಯೋಗಕ್ಕೆ ಸೂಚನೆ ನೀಡಿ ಮಧ್ಯಂತರ ವರದಿ ಪಡೆದು ಅದರ ಅನುಷ್ಠಾನಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದರು. ಸಿ.ಎ.ಆರ್ ಸಿಬ್ಬಂದಿ ಬಲ ಪಡಿಸುವ ಬಗ್ಗೆ ಡಿ.ಜಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿಗಳು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ  ಅಮಿತ್ ಶಾ ಅವರು  ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಎಷ್ಟು ಹತಾಶರಾಗಿದ್ದಾರೆ ಎಂದು ಈ ಮಾತು  ತಿಳಿಸುತ್ತದೆ. ಮೋದಿಯವರ ಭೇಟಿ ಸಂದರ್ಭದಲ್ಲಿ ಅವರಿಗೆ ದೊರೆತ ಜನಬೆಂಬಲ ಕಂಡು ಆತಂಕಗೊಂಡು ಈ ಮಾತುಗಳನ್ನಾಡುತ್ತಾರೆ. ಒಬ್ಬ ಅನುಭವಿ ಮಾಜಿ ಮುಖ್ಯಮಂತ್ರಿಗಳು ಈ ರೀತಿ ಮಾತನಾಡುವುದು ಎಷ್ಟು ಸರಿ ಎನ್ನುವುದನ್ನು ಜನರಿಗೆ ಬಿಡುತ್ತೇವೆ, ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. 

ಹೆಚ್.ಡಿ.ಕುಮಾರಸ್ವಾಮಿ ನಿವೃತ್ತರಾಗುವ ವಯಸ್ಸಲ್ಲ : ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ತಿಳಿದಿಲ್ಲ. ಅವರದ್ದು ನಿವೃತ್ತಿಯಾಗುವ ವಯಸ್ಸಲ್ಲ. ಬಹಳ ಸೇವೆಯನ್ನು ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರೀತಿಯದ್ದೂ ನಡೆಯುತ್ತದೆ. ಪ್ರತಿ ಚುನಾವಣೆಗೂ ಜನರ ಪ್ರಬುದ್ಧತೆ ಹೆಚ್ಚಾಗಿದೆ. ನಾವು ಮಾತನಾಡುವಾಗ ಅದರ ಹಿಂದಿನ ಚಿಂತನೆ ಕಲ್ಪನೆ ಜನರಿಗೆ ತಿಳಿಯುತ್ತದೆ ಎಂದರು. 

ಮಾರ್ಚ್ ಒಂದರಿಂದ ರಥಯಾತ್ರೆ: ನಾಳೆಯಿಂದ ಮಾರ್ಚ್ 4ರವರೆಗೆ ಬಿಜೆಪಿ ರಥಯಾತ್ರೆ ಪ್ರಾರಂಭವಾಗಲಿದ್ದು, ಎಲ್ಲಾ ಮತ ಕ್ಷೇತ್ರಗಳಿಗೆ ಭೇಟಿ ನೀಡಿ ದಾವಣಗೆರೆಯಲ್ಲಿ  ಬೃಹತ್ ಸಮಾವೇಶವಾಗಲಿದೆ. ಈ  ರಥಯಾತ್ರೆ  ಸಂದರ್ಭದಲ್ಲಿ ಹಲವಾರು ಜನ ಭಾಗವಹಿಸಲಿದ್ದಾರೆ ಎಂದರು. 

ಪ್ರಧಾನಮಂತ್ರಿಗಳು, ಗೃಹ ಸಚಿವರು, ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಹಾಗೂ ಧರ್ಮೇಂದ್ರ ಪ್ರಧಾನ್ ಅವರೂ ರಾಜ್ಯಕ್ಕೆ ಬಂದು ಹೋಗಿದ್ದು, ದೊಡ್ಡ ಪ್ರಮಾಣದಲ್ಲಿ ಪ್ರಚಾರವಾಗುತ್ತದೆ ಹಾಗೂ ಎಲ್ಲಾ ಪ್ರಮುಖ ನಾಯಕರೂ ಬರುತ್ತಾರೆ ಎಂದರು. ಚುನಾವಣೆಗೆ ಸ್ಪರ್ಧಿಸುವರ ಪಟ್ಟಿ ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ ಎಂದರು. 

Leave a Reply

Your email address will not be published. Required fields are marked *

error: Content is protected !!