ಅಸ್ವಸ್ಥ ನಾರಾಯಣನಿಗೆ ಮಾನಸಿಕ ಕಾಯಿಲೆ ಇರಬೇಕು: ಸಿದ್ದರಾಮಯ್ಯ

ಕೊಪ್ಪಳ: ಟಿಪ್ಪು ಸುಲ್ತಾನ್ ರೀತಿಯಲ್ಲಿಯೇ ಹೊಡೆದು ಸಾಯಿಸಬೇಕು ಎಂದು ನನ್ನ ಬಗ್ಗೆ ಹೇಳಿರುವ ಸಚಿವ ಅಶ್ವತ್ಥನಾರಾಯಣ ಈಗ ಅಸ್ವಸ್ಥ ನಾರಾಯಣ ಆಗಿದ್ದು, ಮಾನಸಿಕ ಕಾಯಿಲೆ ಇರಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಯಲಬುರ್ಗಾದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ರೈತರು, ದಲಿತರು, ಅಲ್ಪಸಂಖ್ಯಾತರು, ಬಡವರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಇನ್ನೊಬ್ಬರನ್ನು ಹೊಡೆದು ಹಾಕುವ ಬಗ್ಗೆ ‌ಬಿಜೆಪಿ ಮಾತನಾಡುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಕೆಲಸ ಕೇಳಬೇಡಿ. ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಇಂಥವರ ಸರ್ಕಾರ ಅಧಿಕಾರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.

ಅಶ್ವತ್ಥನಾರಾಯಣ ರಾಜಕಾರಣದಲ್ಲಿ ಇರಲು‌ ಲಾಯಕ್ಕಿಲ್ಲ. ಇಂಥವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದರು.

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್ ಜೊತೆ ಕೈ ಜೋಡಿಸಿದರೂ ಪ್ರಯೋಜನವಾಗಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಜನರಿಗೆ ಭ್ರಮನಿರಸನವಾಗಿದೆ ಎಂದರು.

ಜನ‌ ಭಾವೈಕ್ಯದಿಂದ ಇರುವುದು ಬಿಜೆಪಿಗೆ ಬೇಕಾಗಿಲ್ಲ. ಜನರ ನಡುವೆ ದ್ವೇಷ ಬಿತ್ತುವುದರಿಂದ ಚುನಾವಣೆಯ ಲ್ಲಿ ಮತಗಳು ಸಿಗುತ್ತವೆ ಎನ್ನುವ ಭ್ರಮೆಯಲ್ಲಿ ಬಿಜೆಪಿ ‌ಇದೆ. ರಾಜಕಾರಣ ಇನ್ನೊಬ್ಬರ ಮೇಲೆ ಸೇಡು ತೀರಿಸಿ ಕೊಳ್ಳಲು ಇಲ್ಲ. ಸ್ವಾರ್ಥ ಸಾಧನೆಗೂ ಅಲ್ಲ. ಸಮಾಜ ಸೇವೆಯೇ ರಾಜಕಾರಣದ ಮೂಲ ಉದ್ದೇಶವಾಗಿದ್ದು, ಬಿಜೆಪಿ ಮೂಲ ತತ್ವವನ್ನೇ ಮರೆತು ರಾಜ್ಯದ ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಅತಿ ಹೆಚ್ಚು ಕೆಲಸ ಮಾಡಿದವರ ಪೈಕಿ ಬಸವರಾಜ ರಾಯರಡ್ಡಿ ಕೂಡ ಒಬ್ಬರು. ಯಲಬುರ್ಗಾ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಸೋತಿದ್ದು ಅಚ್ಚರಿ ತಂದಿದೆ. ಈ‌ ಬಾರಿ ಕಾಂಗ್ರೆಸ್ ಪರ ಅಲೆ ಇದ್ದು ರಾಯರಡ್ಡಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!