ಬಿಬಿಸಿ ಸಂಸ್ಥೆಯ ನವದೆಹಲಿಯ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ
ನವದೆಹಲಿ ಫೆ.14 : ಬಿಬಿಸಿ ಸಂಸ್ಥೆಯ ನವದೆಹಲಿಯ ಕಚೇರಿ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತೆರಿಗೆಗೆ ಸಂಬಂಧಿಸಿದಂತೆ ಹಾಗೂ ಅಂತರರಾಷ್ಟ್ರೀಯ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ನವದೆಹಲಿಯ ಕಚೇರಿಯಲ್ಲಿ ಈ ತಪಾಸಣೆ ನಡೆಸಲಾಗಿದ್ದು, ಐಟಿ ಅಧಿಕಾರಿಗಳು ಬಿಬಿಸಿ ಕಚೇರಿ ಸಿಬ್ಬಂದಿಯ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ..
ಗುಜರಾತ್ ಕೋಮು ಗಲಭೆ ಕುರಿತು ಬಿಬಿಸಿ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ವ್ಯಾಪಕ ಚರ್ಚೆಯಾಗಿತ್ತು. ಬಿಬಿಸಿ ಸಿದ್ಧಪಡಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ತಡೆ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಯಾವ ಕಾರಣವೂ ಸರಿಯಾಗಿಲ್ಲ, ಸಮಂಜಸವಾಗಿಲ್ಲ ಎಂದು ವಿರೋಧ ಪಕ್ಷಗಳು ಹೇಳಿದ್ದವು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ ನಿಯಮ- 2021ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿ, ಈ ಸಾಕ್ಷ್ಯಚಿತ್ರವನ್ನು ತಡೆಹಿಡಿಯುವಂತೆ ಯೂಟ್ಯೂಬ್ಗೆ, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವೆಬ್ ಕೊಂಡಿಗಳನ್ನು ತಡೆಹಿಡಿಯುವಂತೆ ಟ್ವಿಟರ್ಗೆ ಸೂಚನೆ ರವಾನಿಸಿತ್ತು ಎಂದು ತಿಳಿದು ಬಂದಿದೆ.