ನಿಮ್ಮ ಸ್ಪರ್ಧೆ ಕಾರ್ಕಳದ, ಹಿಂದುತ್ವ, ಜನತೆಯ ಹಿತವಲ್ಲ: ಅದು ತನು- ಮನ-ಧನಕ್ಕಾಗಿ-ಸುನಿಲ್ ಕುಮಾರ್
ಉಡುಪಿ: ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನಮಗೆ ಮೊದಲೇ ಅನುಮಾನವಿತ್ತು. ಅದು ನಿಜವಾಗಿದೆ ! ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಸಚಿವ ವಿ ಸುನಿಲ್ ಕುಮಾರ್ ಅವರು ಪ್ರಮೋದ್ ಮುತಾಲಿಕ್ ಗೆ ತಿರುಗೇಟು ನೀಡಿದ್ದಾರೆ.
ಪ್ರಮೋದ್ ಮುತಾಲಿಕ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ನೀಡಿರುವ ಹೇಳಿಕೆ ಸಂಬಂಧಿಸಿ ಟ್ವಿಟ್ ಮಾಡಿರುವ ಸುನೀಲ್ ಕುಮಾರ್, “ನೀವು ಕಾರ್ಕಳದಿಂದ ಸ್ಪರ್ಧೆಗೆ ಇಳಿಯುವುದನ್ನು ನಾನು ಮೊದಲೇ ಸ್ವಾಗತಿಸಿದ್ದೇನೆ. ಈಗ ನಿಮಗೆ ತನು ಮನ ಧನ ಸಹಾಯ ಮಾಡುವವರೂ ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಆಶಿಸುತ್ತೇನೆ. ನಿಮ್ಮ ಸ್ಪರ್ಧೆಯ ಉದ್ದೇಶ ಏನೆಂಬುದನ್ನು ಕೆಲ ದಿನಗಳ ಹಿಂದೆ ಓಟು, ನೋಟು ಹೇಳಿಕೆಯ ಮೂಲಕ ತಿಳಿಸಿದ್ದಿರಿ. ಈಗ ತನುಮನಧನ ಸಹಾಯವಿದೆ ಎಂದು ಹೇಳುತ್ತಿದ್ದೀರಿ. ಒಟ್ಟಾರೆಯಾಗಿ ನಿಮ್ಮಈ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ, ಹಿಂದುತ್ವದ ಹಿತವಲ್ಲ, ಜನತೆಯ ಹಿತವೂ ಅಲ್ಲ. ಅದು ತನು- ಮನ-ಧನ – ನೋಟಿಗಾಗಿ ಎಂಬುದು ನಿಮ್ಮ ಹೇಳಿಕೆಯಲ್ಲೇ ಸ್ಪಷ್ಟವಾಗಿದೆ’ ಎಂದು ಟೀಕಿಸಿದ್ದಾರೆ.