ಕಪ್ಪೆ ಸಾಂಬರ್ ಸವಿದ ಆರು ವರ್ಷದ ಬಾಲಕಿ ಸಾವು- ತಂದೆ ವಿರುದ್ಧ ದೂರು ದಾಖಲು

ಮನೆಯೊಳಕ್ಕೆ ಬಂದ ಕಪ್ಪೆಯನ್ನು ಹಿಡಿದು ಸಿಟ್ಟಿನಿಂದ ಅದನ್ನು ರಾತ್ರಿಯೂಟಕ್ಕೆ ಸಾಂಬಾರ್ ಮಾಡಿ ಮನೆಮಂದಿಗೆ ಉಣಬಡಿಸಿದ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಪುತ್ರಿಯನ್ನು ಕಳೆದುಕೊಂಡ ಘಟನೆ ಕೊಯೆಂಜಾರ್ ವರದಿಯಾಗಿದೆ.

ಸಾಂಬಾರ್ ತಿಂದು ಆರು ವರ್ಷದ ಪುತ್ರಿ ಸುಮಿತ್ರಾ ಮುಂಡಾ ಶುಕ್ರವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಮತ್ತೊಬ್ಬ ಪುತ್ರಿ ನಾಲ್ಕು ವರ್ಷದ ಮುನಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೊಯೆಂಜಾರ್ ಜಿಲ್ಲೆಯ ಜೋಡಾ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಇದೇ ಸಾಂಬಾರ್ ತಿಂದ ತಂದೆ ಮುನಾ ಮುಂಡಾ (40) ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಮಕ್ಕಳು ಅಸ್ವಸ್ಥರಾದ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಗುರುದಾ ಗ್ರಾಮಕ್ಕೆ ಧಾವಿಸಿದರು. ಪ್ರತ್ಯಕ್ಷದರ್ಶಿಗಳು ನೀಡಿದ ವಿವರದಂತೆ, ಮುಂಡಾ ಮನೆಗೆ ಗುರುವಾರ ರಾತ್ರಿ ಕಪ್ಪೆ ಪ್ರವೇಶಿಸಿದೆ. ಇದರಿಂದ ಕೋಪಗೊಂಡ ಮುಂಡಾ ಅದನ್ನು ಕೊಂದು ರಾತ್ರಿಯೂಟಕ್ಕೆ ಸಾಂಬಾರ್ ಮಾಡಿದ. ಇದನ್ನು ಸೇವಿಸಿದ ಮಕ್ಕಳು ಅಸ್ವಸ್ಥರಾಗಿ ವಾಂತಿ ಮಾಡಿಕೊಂಡು ಪ್ರಜ್ಞೆ ಕಳೆದುಕೊಂಡರು. ಶುಕ್ರವಾರ ಮಕ್ಕಳನ್ನು ಕೊಯೆಂಜಾರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಿತ್ರಾ ಶುಕ್ರವಾರ ರಾತ್ರಿ ಮೃತಪಟ್ಟಳು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!