ಕನ್ನಡ ಸಂಘ ಬಹ್ರೈನ್: ನೂತನ ಕನ್ನಡ ಭವನ ಸೆ.23ರಂದು ಉದ್ಘಾಟನೆ
![](https://udupitimes.com/wp-content/uploads/2022/09/IMG-20220917-WA0101.jpg)
ಬಹ್ರೈನ್ ಸೆ.17(ಉಡುಪಿ ಟೈಮ್ಸ್ ವರದಿ): ಬಹ್ರೈನ್ ದೇಶದ ರಾಜಧಾನಿ ಮನಾಮಾದಲ್ಲಿ ‘ಕನ್ನಡ ಸಂಘ ಬಹ್ರೈನ್’ನ ನೂತನ ಕನ್ನಡ ಭವನ ಇದೇ ಸೆಪ್ಟೆಂಬರ್ 23 ರಂದು ಉದ್ಘಾಟನೆಗೊಳ್ಳಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಕನ್ನಡ ಸಂಘ ಬಹ್ರೈನ್ ನ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅವರು, ಕನ್ನಡ ಭವನವು ಸಮುದಾಯದ ಪ್ರತಿಷ್ಠಿತ ಯೋಜನೆಯಾಗಿದ್ದು, ಬಹ್ರೈನ್ನಲ್ಲಿ ನೆಲೆಸಿರುವ 25,000 ಕ್ಕೂ ಹೆಚ್ಚು ಕನ್ನಡಿಗರ ಆಶೋತ್ತರಗಳನ್ನು ಪೂರೈಸಲು ಮತ್ತು ಉತ್ತಮ ಸೇವೆ ನೀಡಲು ಸಹಾಯ ಮಾಡುತ್ತದೆ. ಉದ್ಘಾಟನೆಗೆ ಸಜ್ಜಾದ ಬಹ್ರೈನ್ನಲ್ಲಿ ನೆಲೆಸಿರುವ ಕನ್ನಡಿಗರ ಮಹತ್ವಾಕಾಂಕ್ಷೆಯ ಬಹ್ರೈನ್ ನ ಕನ್ನಡ ಭವನವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ಪಿಯೂಷ್ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸೀಮಿತ ಸ್ಥಳಾವಕಾಶ ಇರುವ ಕಾರಣ, ಆಹ್ವಾನಿತರು ಮತ್ತು ಸಂಘದ ಸದಸ್ಯರಿಗೆ ಮಾತ್ರ ಅವಕಾಶವಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9 ಗಂಟೆಗೆ ಕಟ್ಟಡದ ಉದ್ಘಾಟನೆ ನಡೆಯಲಿದೆ. ಕರ್ನಾಟಕ ರಾಜ್ಯ ಸರ್ಕಾರದ ನೆರವಿನಿಂದ ಸುಮಾರು ಹತ್ತು ಕೋಟಿ ರೂ. ವೆಚ್ಚದ, ಭಾರತದ ಹೊರಗೆ ನಿರ್ಮಿತವಾದ ಪ್ರಥಮ ಕನ್ನಡ ಭವನ ಇದಾಗಿದ್ದು, ನಾಲ್ಕು ಅಂತಸ್ತಿನ ಕನ್ನಡ ಭವನವು ಬಹುಪಯೋಗಿ ಸಭಾಂಗಣ, ಗ್ರಂಥಾಲಯ, ಕನ್ನಡ, ಯೋಗ, ಯಕ್ಷಗಾನ ತರಬೇತಿ ಕೇಂದ್ರ,ವಾಣಿಜ್ಯ ಮಳಿಗೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಅನಿವಾಸಿ ಕನ್ನಡಿಗರ ವೇದಿಕೆಯ ಮಾಜಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್, ವಿಕೆಎಲ್ ಹೋಲ್ಡಿಂಗ್ ಮತ್ತು ಅಲ್ ನಮಾಲ್ ಗ್ರೂಪ್ ಅಧ್ಯಕ್ಷರಾದ ಡಾ. ವರ್ಗೀಸ್ ಕುರಿಯನ್, ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ್ ಭಟ್, ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಸಂಪಾದಕರಾದ ರವಿ ಹೆಗಡೆ, ಬಹ್ರೈನ್ ಕ್ಯಾಪಿಟಲ್ ಗವರ್ನರೇಟ್ನ ಮಾಹಿತಿ ಮತ್ತು ಅನುಸರಣೆ ವಿಭಾಗದ ನಿರ್ದೇಶಕರಾದ ಶ್ರೀ ಯುಸುಫ್ ಲೋರಿ, ಉದ್ಯಮಿಗಳಾದ ಕೆ.ಪ್ರಕಾಶ್ ಶೆಟ್ಟಿ, ಕನ್ನಡಪ್ರಭ ಪುರವಣಿ ಸಂಪಾದಕರೂ, ಲೇಖಕರೂ ಆದ ಗಿರೀಶ್ ರಾವ್ ಹತ್ವಾರ್ (ಜೋಗಿ) ಭಾಗವಹಿಸಲಿದ್ದಾರೆ. ಇವರೊಂದಿಗೆ ಇವರೊಂದಿಗೆ ನ್ಯಾಷನಲ್ ಗ್ರೂಪ್ ಆಫ್ ಕಂಪನಿಗಳು ಇದರ ಅಧ್ಯಕ್ಷ ವಿ ಕೆ ರಾಜಶೇಖರನ್ ಪಿಳ್ಳೈ, ಅಖಿಲ ಕರ್ನಾಟಕ ಮಕ್ಕಳ ಕೂಟ ಅಧ್ಯಕ್ಷ ಕೆ. ಮೋಹನ್ದೇವ್ ಆಳ್ವ, ಬೆಂಗಳೂರು ಉದ್ಯಮಿ ಆನಂದ ಭಟ್, ಬಹ್ರೇನ್, ಕತಾರ್ ಮತ್ತು ಒಮಾನ್ ನ ಬಿಕೆಜಿ ಹೋಲ್ಡಿಂಗ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ ಜಿ ಬಾಬುರಾಜನ್, ಸಾರಾ ಗ್ರೂಪ್ ನ ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬಹ್ರೈನ್ ಕ್ರಿಕೆಟ್ ಬೋರ್ಡ್ ನ ಸಲಹೆಗಾರರಾದ ಮೊಹಮ್ಮದ್ ಮನ್ಸೂರ್, ಯುಎಇ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಔಮಾ ಮಿಡಲ್ ಈಸ್ಟ್ ಇದರ ವ್ಯವಸ್ಥಾಪಕ ನಿರ್ದೇಶಕ ನವೀನ್ ಡಿ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ, ರಿಫಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸನ್ಮಾನ ಸಮಾರಂಭ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆ 4.30 ರಿಂದ ಕಿಂಗ್ಡಮ್ ಹಾಲ್, ನ್ಯೂ ಮಿಲೇನಿಯಮ್ ಸ್ಕೂಲ್, ಜಿಂಜ್ ನಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿರುತ್ತದೆ ಎಂದು ತಿಳಿಸಿದ್ದಾರೆ.