ಕಡಿಯಾಳಿ ತಿರುಗುವ ಮುಚ್ಚಿಗೆ ರಚಿಸಿದ್ದ ಶಿಲ್ಪಿ ಸುದರ್ಶನ ಆಚಾರ್ಯರಿಗೆ ‘ಎಸ್ಕೆಜಿಐ-ಫಾಲ್ಕೆ’ ಪ್ರಶಸ್ತಿ
![](https://udupitimes.com/wp-content/uploads/2022/09/Screenshot_2022-09-16-10-06-06-61_6012fa4d4ddec268fc5c7112cbb265e73.jpg)
ಮಂಗಳೂರು: ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯು ವಿಶ್ವಕರ್ಮರ ಸಾಂಪ್ರದಾಯಿಕ ಪಂಚವೃತ್ತಿಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕುಶಲಕರ್ಮಿಗಳನ್ನು ಗುರುತಿಸಿ ಗೌರವಿಸಲು ನೀಡುವ ‘ಎಸ್.ಕೆ.ಜಿ.ಐ-ಫಾಲ್ಕೆ ಪ್ರಶಸ್ತಿ’ ಗೆ ಕಡಿಯಾಳಿ ಶ್ರೀ ಮಹಿಷಾಮರ್ಧಿನಿ ದೇವಸ್ಥಾನದಲ್ಲಿ ತಿರುಗುವ ಮುಚ್ಚಿಗೆಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾಷ್ಠ ಶಿಲ್ಪಿ ಸುದರ್ಶನ ಆಚಾರ್ಯ ಆಯ್ಕೆಯಾಗಿದ್ದಾರೆ.
ಇವರೊಂದಿಗೆ ಸ್ವರ್ಣ ಶಿಲ್ಪ ಕ್ಷೇತ್ರದ ಸಾಧನೆಗಾಗಿ ಎಂ.ಸುಧಾಮ ಆಚಾರ್ಯ ಮಂಗಳೂರು, ಎರಕ ಶಿಲ್ಪಿ ನಾಗೇಶ್ ಆಚಾರ್ಯ ಶಂಕರಪುರ, ಆಯಸ್ ಶಿಲ್ಪಿ ಗೋಪಾಲ ಆಚಾರ್ಯ ಪುತ್ತೂರು ಮತ್ತು ಶಿಲಾ ಶಿಲ್ಪ ಕ್ಷೇತ್ರದ ವಿಶೇಷ ಸಾಧನೆಗೈದ ಶೇಷಪ್ಪ ಆಚಾರ್ಯ ಕಾರ್ಕಳ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭ ಸೆಪ್ಟೆಂಬರ್ 18 ರಂದು ಉರ್ವ ಚರ್ಚ್ ಸೆಂಟಿನರಿ ಹಾಲ್ ನಲ್ಲಿ ನಡೆಯಲಿದೆ.
ಪ್ರಶಸ್ತಿಯು 8,000 ರೂ ನಗದು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರಗಳನ್ನು ಒಳಗೊಂಡಿರುತ್ತದೆ ಸೊಸೈಟಿಯ ಪ್ರಕಟನೆ ತಿಳಿಸಿದೆ.