ಸರ್ಕಾರದ ಯೋಜನೆಗಳು ಮತ್ತು ಸಾಧನೆ ಜನತೆ ಮುಂದಿಡಲು ಜನಸ್ಪಂದನೆ- ಸಿಎಂ ಬೊಮ್ಮಾಯಿ

ಬೆಂಗಳೂರು: ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ರಾಜ್ಯದ ಜನತೆ ಮುಂದಿಡಲು ಜನಸ್ಪಂದನೆ ಜನೋತ್ಸವ ಸಮಾವೇಶ ಇಂದು ಹಮ್ಮಿಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ದಾಖಲೆ ಮಟ್ಟದಲ್ಲಿ ವಿಜಯ ಸಾಧಿಸಲಿದೆ. ಇದರ ಪೂರ್ವಭಾವಿಯಾಗಿ ಈ ಸಾಧನಾ ಸಮಾವೇಶ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ಇಂದು ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶಕ್ಕೆ ತೆರಳುವ ಮುನ್ನ ಬೆಳಗ್ಗೆ ದೇವರ ಮೊರೆ ಹೋದ ಸಿಎಂ ಬಸವರಾಜ ಬೊಮ್ಮಾಯಿ, ಅರಮನೆ ರಸ್ತೆಯಲ್ಲಿರುವ ಮಾರುತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಿರ್ವಿಘ್ವವಾಗಿ ಸಮಾವೇಶ ನಡೆಯಲೆಂದು ದೇವರಿಗೆ ಪೂಜೆ ಸಲ್ಲಿಕೆ ಸಲ್ಲಿಸಿ ನಂತರ ನೇರವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ ಹೋಗಿ ಅವರ ಜೊತೆ ಚರ್ಚೆ ನಡೆಸಿದರು. 

ಈ ಹಿಂದೆ 2 ಬಾರಿ ಜನಸ್ಪಂದನ ಸಮಾವೇಶ ರದ್ದಾಗಿತ್ತು.ಈಗಾಗಲೇ ಸಾಕಷ್ಟು ಯೋಜನೆಗಳನ್ನು ಮಾಡಿದ್ದೇವೆ. ಆ ಯೋಜನೆಗಳ ಅನುಷ್ಠಾನದ ಕುರಿತು ಸಮಾವೇಶದಲ್ಲಿ ಹೇಳಲಾಗುತ್ತದೆ ಎಂದು ಹೇಳಿದರು. ಜನಸ್ಪಂದನೆಗೆ ರಾಜ್ಯದ ಮೂಲೆಮೂಲೆಗಳಿಂದ ಜನರು ಸ್ಪಂದಿಸುತ್ತಿದ್ದು ದೊಡ್ಡ ಪ್ರಮಾಣದಲ್ಲಿ ದೊಡ್ಡಬಳ್ಳಾಪುರದಲ್ಲಿ ಸೇರುತ್ತಿದ್ದಾರೆ. ಜನರ ಒತ್ತಾಸೆಯಂತೆ ದೊಡ್ಡಬಳ್ಳಾಪುರ, ಕೋಲಾರ, ತುಮಕೂರು,ಚಿಕ್ಕಬಳ್ಳಾಪುರದ ಹತ್ತಿರ ಸಮಾವೇಶ ಮಾಡಲೇಬೇಕೆಂದು, ಇಲ್ಲಿ ಆರಂಭವಾಗಬೇಕೆಂದು ಇಲ್ಲಿ ಇಂದು ಸಮಾವೇಶ ಕೈಗೊಳ್ಳಲಾಗಿದೆ ಎಂದರು.

ನಮ್ಮ ಸರ್ಕಾರ ಮಾಡಿರುವ ಕಾರ್ಯಕ್ರಮ, ತಂದಿರುವ ಯೋಜನೆಗಳು, ಜನರಿಗೆ ಮುಟ್ಟಿರುವ ರೀತಿ, ಜನ ಕಲ್ಯಾಣ ಕಾರ್ಯಕ್ರಮವನ್ನು ವಿವರಿಸುವುದು, ಆ ಭಾಗದ ಅಭವೃದ್ಧಿಗೆ ಶ್ರೀಕಾರ ಹಾಕುವುದು, ಯೋಜನೆಗಳ ಬಗ್ಗೆ ತಿಳಿಸುವುದು, ಈಗಿನ ರಾಜಕೀಯ ಪರಿಸ್ಥಿತಿ ಬಗ್ಗೆ ತಿಳಿಸುವ ಪ್ರಯತ್ನವನ್ನು ಇಂದಿನ ಸಮಾವೇಶದಲ್ಲಿ ಮಾಡುತ್ತೇವೆ ಎಂದು ಸಿಎಂ ಹೇಳಿದರು.

ಈಗಾಗಲೇ ಬಿಜೆಪಿ ಪಕ್ಷ ಬಲಿಷ್ಠವಾಗಿ ಸಂಘಟನೆಯಾಗಿದ್ದು, ಬರುವ ದಿನಗಳಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿಜಯವಾಗಲಿದೆ ಎಂದರು. ಬಿಜೆಪಿಗೆ ಈಗಾಗಲೇ ಜನಬೆಂಬಲವಿದೆ, 2023ರ ಚುನಾವಣೆಗೆ ದೊಡ್ಡ ಶಕ್ತಿಯನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಸಮಾವೇಶ ನೀಡಲಿದೆ. ಆತ್ಮಸ್ಥೈರ್ಯ, ಜನರಿಗೆ ವಿಶ್ವಾಸ ಕೊಡಲಿದೆ ಎಂದರು. 

Leave a Reply

Your email address will not be published. Required fields are marked *

error: Content is protected !!