ದಾವಣಗೆರೆಯಲ್ಲಿ ಮತ್ತೆ ಘರ್ಜಿಸಲಿದೆ ‘ಮೈಸೂರು ಹುಲಿಯಾ’…
ಬೆಂಗಳೂರು ಆ.2: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಹಾಡಿನ ಸುರಿಮಳೆ ಸುರಿಯಲಿದೆ.
ಸಿದ್ದರಾಮಯ್ಯ ಅವರ ಜೀವನ ಸಾಧನೆಯ ವರ್ಣನೆ ಹೊಂದಿರುವ ಎರಡು ಹಾಡುಗಳು ಅವರ ಹುಟ್ಟು ಹಬ್ಬದ ಶುಭ ಸಂದರ್ಭ ದಲ್ಲಿ ಬಿಡುಗಡೆಗೊಳ್ಳಲಿದೆ. ‘ಕೈ ಹಿಡಿಯೋ ಕೈ ಸಿದ್ದರಾಮಯ್ಯ’ ಎನ್ನುತ್ತ ಆರಂಭವಾಗುವ ‘ಮೈಸೂರು ಹುಲಿಯಾ’ ಎಂಬ ಈ ಹಾಡನ್ನು ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿರ್ಮಾಣ ಮಾಡಿದ್ದಾರೆ.
ಈ ಹಾಡನ್ನು ‘ಸಲಗ’ ಚಿತ್ರದ ಟಿಣಿಂಗ ಮಿಣಿಂಗ ಟಿಶ್ಯಾ’ ಎಂಬ ಹಾಡಿಗೆ ಧ್ವನಿಯಾಗಿ ಖ್ಯಾತಿಪಡೆದಿದ್ದ ಗಿರಿಜಾ ಸಿದ್ದಿ ಅವರು ಜನಪದ ಶೈಲಿಯಲ್ಲಿ ಹಾಡಿದ್ದಾರೆ, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಸಿನಿಮಾ ಶೈಲಿಯಲ್ಲಿ ಹಾಡು ಮೂಡಿಬಂದಿದೆ. ಈ ಹಾಡಿಗೆ ‘ಜೇಮ್ಸ್’ ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.
ಇದರ ಜೊತೆಗೆ ಚೇತನ್ ಕುಮಾರ್ ಅವರು ರಚಿಸಿರುವ ಇನ್ನೊಂದು ಹಾಡು ಬಿಡುಗಡೆಗೊಳ್ಳುತ್ತಿದ್ದು ಈ ಹಾಡನ್ನು . ‘ಚುಟುಚುಟು ಅಂತೈತಿ’ ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದಾರೆ. ಹರ್ಷ ವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಎರಡೂ ಲಿರಿಕಲ್ ವಿಡಿಯೊ ಹಾಡುಗಳು ಆ.3 ರಂದು A2 ಎಂಟರ್ಟೈನ್ಮೆಂಟ್ ಚಾನೆಲ್ನಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.