ಉಡುಪಿ ಕಾಂಗ್ರೆಸ್ ಮುಖಂಡನ ಮೇಲೆ ತಲಾವಾರು ದಾಳಿ ನಡೆಸಿದ ಯುವಕರ ತಂಡ
ಉಡುಪಿ: ಮಣಿಪಾಲದ ಹೋಟೆಲ್ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಮುಂದುವರಿದು, ಪಿಪಿಸಿ ಬಳಿಯಲ್ಲಿ ಯುವಕನ ಮೇಲೆ ತಲವಾರು ದಾಳಿ ಮತ್ತು ಕಬ್ಬಿಣದ ಚಯರ್ನಿಂದ ಹಲ್ಲೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ತೀವ್ರ ಹಲ್ಲೆಗೊಳಾಗದ ವ್ಯಕ್ತಿ ಉಡುಪಿ ಕಾಂಗ್ರೆಸ್ ನ NSUI ಉಪಾಧ್ಯಕ್ಷ, ಚಿಟ್ಪಾಡಿ ಬೈಲೂರು ನಿವಾಸಿ ಶರತ್ ಕುಂದರ್ (25) ಎಂದು ತಿಳಿದುಬಂದಿದೆ.
ಶರತ್ ಕುಂದರ್ ಜ.30 ರಂದು ಸಂಜೆ 9 ಗಂಟೆ ಸುಮಾರಿಗೆ ಸ್ನೇಹಿತನ ಗ್ರ್ಯಾಂಡ್ ವಿಟಾರಾ ಕಾರಿನಲ್ಲಿ ಮಣಿಪಾಲದ ಹೋಟೆಲ್ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೋಟೆಲ್ನಲ್ಲಿ ಶರತ್ ಕುಂದರ್ ರವರ ಕೈ ಆರೋಪಿಗಳ ಪೈಕಿ ಒಬ್ಬರ ಕೈಗೆ ತಾಗಿದ ಹಿನ್ನೆಲೆಯಲ್ಲಿ ಮಾತಿನ ವಾಗ್ವಾದ ನಡೆದಿತ್ತು.
ಬಳಿಕ ಮನೆಗೆ ಹೋಗಲು ಕಲ್ಸಂಕ ಬಳಿಯ ತಲುಪುವಾಗ ಅಕ್ಷತ್ ಪೈ ಎಂಬಾತ ಫೋನ್ ಮಾಡಿ ಹೋಟೆಲ್ನಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ತಿಳಿಸಿದ್ದಾನೆ.
ಅದರಂತೆ ಶರತ್ ಕುಂದರ್ ಹಾಗೂ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್, ರೋಹಿತ್ ಜೊತೆಗೆ ಪಿಪಿಸಿ ಕ್ರಾಸ್ ಸಮೀಪದ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದರು, ಆಗ ರಾತ್ರಿ 11.30ರ ಸುಮಾರಿಗೆ ಟಾಟಾ ಸಫಾರಿ ಹಾಗೂ ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಅಕ್ಷತ್ ಪೈ, ಶಶಾಂಕ್, ರಾಧಾಕೃಷ್ಣ ಜನರಲ್ ಸ್ಟೋರ್ನ ಮಾಲಕ ಸೇರಿದಂತೆ ಇನ್ನೂ 6–7 ಮಂದಿ ಏಕಾಏಕಿ ವಾಹನಗಳಿಂದ ಇಳಿದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚಯರ್ ಬಳಸಿ ಕೊಲೆ ಮಾಡುವ ಉದ್ದೇಶದಿಂದ ಶರತ್ ಕುಂದರ್ ಮೇಲೆ ದಾಳಿ ನಡೆಸಿದ್ದು, ತಲೆಗೆ ಬೀಸಿದಾಗ ತಪ್ಪಿಸಿಕೊಳ್ಳಲು ಕೈಗಳನ್ನು ಮುಂದಿಟ್ಟ ಶರತ್ ಅವರಿಗೆ ಬಲ ಅಂಗೈ, ಮಧ್ಯ ಬೆರಳು ಹಾಗೂ ಎಡ ಕೈ ಮಣಿಕಟ್ಟು ಭಾಗದಲ್ಲಿ ರಕ್ತಗಾಯಗಳಾಗಿವೆ. ಹಲ್ಲೆಯ ವೇಳೆ “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ತಿಳಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ





