ಕಾಂಗ್ರೆಸ್ ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಪ್ರಧಾನಿ ಮೋದಿ

ಜೈಪುರ: ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದಲಿತ ಮೀಸಲಾತಿ ಮುಸ್ಲಿಮರ ಪಾಲಾಗಲಿದೆ ಎಂದು ಪ್ರಧಾನಿ ಮೋದಿ ಮತ್ತೂಮ್ಮೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ರವಿವಾರವಷ್ಟೇ ಹಿಂದೂಗಳ ಸಂಪತ್ತು ಮುಸ್ಲಿಮರ ಪಾಲಾಗಲಿದೆ ಎಂದಿದ್ದ ಅವರು, ಕಾಂಗ್ರೆಸ್‌ ಮೀಸಲಾತಿಯಲ್ಲೂ ಮೋಸ ಮಾಡಲು ಹೊರಟಿದೆ ಎಂದು ಸೋಮವಾರ ಹೇಳಿದ್ದಾರೆ.

ರಾಜಸ್ಥಾನದ ಟೋಂಕ್‌ನಲ್ಲಿ ಮಂಗಳವಾರ ನಡೆದ ಚುನಾವಣ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಧರ್ಮಾಧರಿತವಾಗಿ ಮೀಸಲಾತಿಯನ್ನು ನೀಡುವುದಾಗಿ ಘೋಷಿಸಿದೆ. ಇದೊಂದು ಒಳಸಂಚಾಗಿದ್ದು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ಮೀಸಲಾತಿಯನ್ನು ಕಡಿಮೆ ಮಾಡಿ ಅದನ್ನು ಮುಸ್ಲಿಮರಿಗೆ ನೀಡಲಾಗುತ್ತದೆ. ಅದೇ ರೀತಿ ನಿಮ್ಮ ಸಂಪತ್ತನ್ನೂ ದೋಚಿ ನಿಗದಿತ ಸಮುದಾಯಕ್ಕೆ ನೀಡಲಾಗುತ್ತದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಹನುಮಾನ್‌ ಚಾಲೀಸ ಹಾಕಿದ್ದಕ್ಕೆ ವ್ಯಕ್ತಿಗೆ ಥಳಿಸಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಕಾಂಗ್ರೆಸ್‌ ಕುತಂತ್ರ: ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಮೋದಿ ನೀಡುತ್ತಿರುವ ಮೀಸ ಲಾತಿ ಗ್ಯಾರಂಟಿಯನ್ನು ಧರ್ಮದ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್‌ ಮುಸ್ಲಿಮರಿಗೆ ಮೀಸಲಾತಿ ನೀಡಲು ಮುಂದಾಗಿದೆ. ಈ ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಇದನ್ನೇ ಪ್ರತಿಪಾದಿಸಿದ್ದರು. 2004ರಲ್ಲಿ ಅಧಿಕಾರ ಸಿಕ್ಕಿದಾಗ ಆಂಧ್ರಪ್ರದೇಶದಲ್ಲಿ ದಲಿತರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಹಂಚುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಿತು. ಆದರೆ ಸುಪ್ರೀಂ ಕೋರ್ಟ್‌ ನ್ಯಾಯದ ಪರ ನಿಂತದ್ದರಿಂದ ಇದು ಫ‌ಲ ನೀಡಲಿಲ್ಲ ಎಂದರು. ಇದೊಂದೇ ವಿಷಯವಲ್ಲ, ಕಾಂಗ್ರೆಸ್‌ನ ಸಂಪೂರ್ಣ ರಾಜಕೀಯವೇ ಓಲೈಕೆ ರಾಜಕಾರಣವಾಗಿದೆ. ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಇದನ್ನು ಮಾಡುತ್ತದೆ ಎಂದು ಆರೋಪಿಸಿದರು.

ಸಂಪತ್ತು ವರ್ಗಾವಣೆ: ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ವರ್ಗಾಯಿಸಲಾಗುತ್ತದೆ ಎಂದು ರವಿವಾರ ಹೇಳಿದ್ದನ್ನೇ ಪುನರುಚ್ಚರಿಸಿದ ಮೋದಿಯವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನು ದೋಚಲಾಗುತ್ತದೆ ಎಂದರು. ರವಿವಾರದ ಹೇಳಿಕೆಯನ್ನು ಉಲ್ಲೇಖೀಸಿದ ಮೋದಿ, “ನಾನು ಸತ್ಯ ಹೇಳುತ್ತೇನೆ. ಹೀಗಾಗಿ ಕಾಂಗ್ರೆಸ್‌ ನಾಯಕರು ನನ್ನ ವಿರುದ್ಧ ದಾಳಿ ನಡೆಸುತ್ತಾರೆ’ ಎಂದರು.

ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ನೀಡಲಾಗಿದ್ದ ಮೀಸಲಾತಿಯ ಸಾಂವಿಧಾನಿಕ ಮಾನ್ಯತೆ 2020ರಲ್ಲಿ ಕೊನೆಗೊಳ್ಳುತ್ತಿತ್ತು. ಆದರೆ ನಾನು ಅದನ್ನು ಮುಂದಿನ 10 ವರ್ಷಗಳಿಗೆ ವಿಸ್ತರಿಸಿದೆ ಎಂದು ಮೋದಿ ಇದೇ ವೇಳೆ ಹೇಳಿದರು.

ಪ್ರಧಾನಿ ಮೋದಿ ಹೇಳುತ್ತಿರುವುದೇನು? ಸಂಪತ್ತು ಗಳಿಕೆಯಲ್ಲಿರುವ ಅಸಮಾನತೆ ತೊಡೆದು ಹಾಕಲು ನೀತಿ ಜಾರಿ ಮಾಡುವುದಾಗಿ ಕಾಂಗ್ರೆಸ್‌ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ನೀಡಲಾಗುತ್ತದೆ ಎಂದಿದ್ದಾರೆ.ದೇಶಾದ್ಯಂತ ಜಾತಿಗಣತಿ ನಡೆಸುವು ದಾಗಿ ಹೇಳಿರುವ ಕಾಂಗ್ರೆಸ್‌ ಮಾತಿಗೆ ಪ್ರತಿಕ್ರಿಯಿಸಿರುವ ಮೋದಿ, ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಹಂಚಿಕೆ ಮಾಡಲು ಕಾಂಗ್ರೆಸ್‌ ಕುತಂತ್ರ ನಡೆಸುತ್ತಿದೆ ಎಂದಿದ್ದಾರೆ. ಗೋವಾ ಮೇಲೆ ಸಂವಿಧಾನವನ್ನು ಹೇರಲಾಗುತ್ತಿದೆ ಎಂಬ ಕಾಂಗ್ರೆಸ್‌ ನಾಯಕನ ಮಾತಿಗೆ ಪ್ರತಿಕ್ರಿಯಿ ಸಿರುವ ಮೋದಿ, ದೇಶವನ್ನು ಒಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದಿದ್ದಾರೆ.

ಮೋದಿ ವಿರುದ್ಧ ದೂರು ಪರಿಶೀಲನೆ- ಚುನಾವಣಾ ಆಯೋಗ: “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಿಂದೂಗಳ ಸಂಪತ್ತನ್ನು ಕಿತ್ತುಕೊಂಡು ನುಸುಳುಕೋರರಿಗೆ, ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಲಿದೆ’ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಸಂಬಂಧ ದೂರುಗಳು ಬಂದಿದ್ದು, ಅವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಚುನಾವಣ ಆಯೋಗದಮೂಲಗಳು ತಿಳಿಸಿವೆ. ಚುನಾವಣ ಆಯೋಗವು ಪಕ್ಷಾತೀತ ನಿಲುವು ಪ್ರದರ್ಶಿಸದೆ ಇರುವುದು ದುರದೃಷ್ಟಕರ. ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಮಾತನಾಡಿದ್ದ ಪ್ರಧಾನಿ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. -ಪಿಣರಾಯಿ ವಿಜಯನ್‌, ಕೇರಳ ಸಿಎಂ

Leave a Reply

Your email address will not be published. Required fields are marked *

error: Content is protected !!