ಕುಂದಾಪುರ: ಕಾರ್ ಡಿಕ್ಕಿ- ದ್ವಿಚಕ್ರ ಸವಾರ ಮೃತ್ಯು
ಕುಂದಾಪುರ ಜು.31(ಉಡುಪಿ ಟೈಮ್ಸ್ ವರದಿ): ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಕುಂದಾಪುರದ ಕಾಳಾವರ ಗ್ರಾಮದ ಶ್ರೀ ಕಟ್ಟೆ ಭಂಡಾರಿ ದೇವಸ್ಥಾನದ ಸಮೀಪ ನಡೆದಿದೆ.
ನರಸಿಂಹ ಶೆಟ್ಟಿ (65) ಮೃತಪಟ್ಟವರು. ನಿನ್ನೆ ಸಂಜೆ ಇವರು ತಮ್ಮ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಿಂತುಕೊಂಡಿದ್ದ ವೇಳೆ ಕೊಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಕಾರೊಂದನ್ನು ಚಲಾಯಿಸಿಕೊಂಡು ಬಂದ ಅದರ ಚಾಲಕ ಸುದೀಪ್ ಶೆಟ್ಟಿ ಎಂಬಾತ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ನರಸಿಂಹ ಶೆಟ್ಟಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.