ಹೆಬ್ರಿ: ಆಭರಣದಂಗಡಿಯಲ್ಲಿ ಸರಣಿ ಕಳವು
![](https://udupitimes.com/wp-content/uploads/2021/12/police.jpg)
ಹೆಬ್ರಿ ಸೆ.14(ಉಡುಪಿ ಟೈಮ್ಸ್ ವರದಿ): ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಜುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಹೆಬ್ರಿಯ ಆಗುಂಬೆ ಹೆಬ್ರಿ ರಸ್ತೆಯಲ್ಲಿ ಇರುವ ಶ್ರೀ ಗಣೇಶ ಜ್ಯುವೆಲ್ಲರ್ ಹಾಗೂ ಕುಚ್ಚೂರು ರಸ್ತೆಯಲ್ಲಿ ಶ್ರೀ ರಾಜರಾಜೇಶ್ವರಿ ಜುವೆಲ್ಲರ್ ಗೆ ನುಗ್ಗಿದ ಕಳ್ಳರು 3.53 ಲಕ್ಷ ರೂ.ಮೌಲ್ಯ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವುಮಾಡಿಕೊಂಡು ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ನೆಹರು ನಗರದ ಹರೀಶ ಹೆಗ್ಡೆ ಎಂಬವರಿಗೆ ಸೇರಿದ ಆಗುಂಬೆ ಹೆಬ್ರಿ ರಸ್ತೆಯ ಬಳಿಯಿರುವ ಶ್ರೀ ಗಣೇಶ ಎಂಬ ಜ್ಯುವೆಲ್ಲರ್ ಅಂಗಡಿಯ ಶೆಟರ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಶೋ ಕೇಸ್ ನಲ್ಲಿ ಇಟ್ಟಿದ್ದ ಅಂದಾಜು 3,50,000 ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ.
ಮತ್ತೊಂದೆಡೆ ಕುಚ್ಚೂರು ಕಾನ್ ಬೆಟ್ಟು ನಿವಾಸಿ ರುದ್ರಯ್ಯಆಚಾರ್ಯ ಅವರಿಗೆ ಸೇರಿದ ಹೆಬ್ರಿಯ ಕುಚ್ಚೂರು ರಸ್ತೆಯಲ್ಲಿರುವ ಶ್ರೀ ರಾಜರಾಜೇಶ್ವರಿ ಜುವೆಲ್ಲರ್ ಅಂಗಡಿಯ ಶೆಟರ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯ ಶೋ ಕೇಸ್ ಇರಿಸಿದ್ದ ಸುಮಾರು 3,750 ರೂ ಮೌಲ್ಯದ ಸುಮಾರು ಒಟ್ಟು 50 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ.
ಈ ಎರಡು ಕಳವು ಪ್ರಕರಣಗಳು ಇಂದು ಬೆಳಿಗ್ಗೆ ಅಂಗಡಿ ಬಳಿ ಬಂದಾಗ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.