ವಿಆರ್​ಎಲ್​ ಕಂಪನಿಗೆ ಹೋಲುವಂತೆ ನಕಲಿ ವೆಬ್​ಸೈಟ್​ ಸೃಷ್ಟಿಸಿ, ಗ್ರಾಹಕರಿಗೆ ವಂಚನೆ ಆರೋಪಿ ಸೆರೆ

ಬೆಂಗಳೂರು: ವಿಆರ್​ಎಲ್​ ಕಂಪನಿಗೆ ಹೋಲುವಂತೆ ನಕಲಿ ವೆಬ್​ಸೈಟ್​ ಸೃಷ್ಟಿಸಿ, ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ದೀಪಕ್​ ಕೌಶಿಕ್​ ಎಂಬಾತನ ವಿರುದ್ಧ ಕೊಡಿಗೇಹಳ್ಳಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಆರೋಪಿ ದೀಪಕ್​ ಕೌಶಿಕ್​ ಹೈದರಾಬಾದ್​ನಲ್ಲಿರುವ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಟ್ರಾನ್ಸ್​ಪೋರ್ಟೇಷನ್​ ಮಾಡುವುದಾಗಿ ಬೆಂಗಳೂರಿನ ಬೃಂದಾ ಕೆ.ವರ್ಮಾ ಅವರಿಂದ 10500 ರೂ. ಪಾವತಿಸಿಕೊಂಡು ದೀಪಕ್​ ಕೌಶಿಕ್​ ವಂಚಿಸಿದ್ದಾನೆ. ಹೈದರಾಬಾದ್​ ಟ್ರಾನ್ಸ್​ಪೋರ್ಟೇಷನ್​ ಸಂಸ್ಥೆಗೆ ಸೇರಿದ ಪೀಣ್ಯ ಗೋದಾಮಿನಲ್ಲಿದ್ದ ಕಾರನ್ನು ಪತ್ತೆಹಚ್ಚಿರುವ ಪೊಲೀಸರು, ಬೃಂದಾ ಅವರ ವಶಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಟಾಟಾನಗರದ ಬೃಂದಾ ಕೆ. ವರ್ಮಾ ಎಂಬುವರು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಮಾರುತಿ 800 ಕಾರನ್ನು ಟ್ರಾನ್ಸ್​ಪೋರ್ಟೇಷನ್​ ಸರ್ವೀಸ್​ ಕಂಪನಿ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳಲು ಗೂಗಲ್​ ಸರ್ಚ್​ ಮಾಡಿದ್ದರು. ಆಗ ನಕಲಿ ವೆಬ್​ಸೈಟ್​ www.vrlcarcarrier.com ಲಭ್ಯವಾಗಿದ್ದು, ಅದರಲ್ಲೇ ಬುಕ್​ ಮಾಡಿದ್ದಾರೆ. ಜ.15ಕ್ಕೆ ಆರೋಪಿ ದೀಪಕ್​ ಕೌಶಿಕ್​, ಬೃಂದಾ ಅವರಿಗೆ ಕರೆ ಮಾಡಿ ಬೆಂಗಳೂರು ವಿಆರ್​ಎಲ್​ ಕಚೇರಿಯಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಕಾರನ್ನು ಬೆಂಗಳೂರಿಗೆ ತರಲು 10,500 ರೂ. ಶುಲ್ಕ ಆಗುತ್ತೆ ಎಂದು ಕೊಟೇಷನ್​ ಕಳುಹಿಸಿದ್ದ. ಬುಕ್ಕಿಂಗ್​ ಶುಲ್ಕವಾಗಿ ಮೊದಲಿಗೆ 2 ಸಾವಿರ ರೂ. ಆನ್​ಲೈನ್​ನಲ್ಲಿ ಪಾವತಿಸುವಂತೆ ತಿಳಿಸಿದ್ದ.

ಆರೋಪಿಯ ಮಾತು ನಂಬಿದ ಬೃಂದಾ, ಆತನ ಬ್ಯಾಂಕ್​ ಖಾತೆಗೆ 2 ಸಾವಿರ ರೂ. ಹಾಕಿದ್ದರು. ಮರುದಿನ ಪ್ರವಿಣ್​ ಎಂಬಾತ ರಾಜಮಂಡ್ರಿಯಲ್ಲಿದ್ದ ಕಾರು, ಬಟ್ಟೆ, ಖಾದ್ಯವಿದ್ದ 3 ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿದ್ದ. 1 ಗಂಟೆ ಬಳಿಕ ಕರೆ ಮಾಡಿದ ದೀಪಕ್​ ಕೌಶಿಕ್​, ಉಳಿದ 8500 ಹಣ ಕೊಡುವಂತೆ ಒತ್ತಾಯಿಸಿದ್ದ. ಕೊನೆಗೆ ಬೃಂದಾ ಅವರು ಜ.16ರಂದು ಆರೋಪಿ ಖಾತೆಗೆ 8500 ರೂ. ವರ್ಗಾಯಿಸಿದ್ದರು. ನಂತರ ಅನುಮಾನ ಬಂದು ವಿಆರ್​ಎಲ್​ ಲಾಜಿಸ್ಟಿಕ್​ ಲಿಮಿಟೆಡ್ ಕಚೇರಿಗೆ ಕರೆ ಮಾಡಿ ದೀಪಕ್​ ಕೌಶಿಕ್​ ಬಗ್ಗೆ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಇಲ್ಲ ಎಂದು ಗೊತ್ತಾಗಿದೆ.

ಬೃಂದಾ ಅವರು ಪುನಃ ಕೌಶಿಕ್​ಗೆ ಕರೆ ಮಾಡಿದಾಗ ಕಾರು ಚೆನ್ನೈನಲ್ಲಿ ಇದೆ. ಬೆಂಗಳೂರಿಗೆ ತರಲು ಜಿಎಸ್​ಟಿ ಮತ್ತು ವಿಮಾ ಹಣ ಕಟ್ಟಬೇಕಿದ್ದು, 10,185 ರೂ. ಹೆಚ್ಚುವರಿಯಾಗಿ ಪಾವತಿಸುವಂತೆ ಇನ್​ವಾಯ್ಸ್​ ಕಳುಹಿಸಿದ್ದ. ಕಾರು ಶಿಫ್ಟ್​​ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಕೇಳಿದಾಗ ಸೋನು ಪೋನಿಯಾ ಎಂಬಾತನ ಹೆಸರೇಳಿ ಆತನ ಮೊಬೈಲ್​ ನಂಬರ್​ ಕೊಟ್ಟಿದ್ದ. ಆ ನಂಬರ್​ಗೆ ಕರೆ ಮಾಡಿದಾಗ ಜ.17ರಂದು ಕಾರು ಡೆಲಿವರಿ ಮಾಡಲಾಗುವುದು. ದೀಪಕ್​ ಕೌಶಿಕ್​ಗೆ ಹೆಚ್ಚುವರಿ ಹಣ ಕೊಡಬೇಡಿ ಎಂದು ಹೇಳಿದ್ದ.

ಜ.18ರಂದು ಬೃಂದಾ ಅವರಿಗೆ ಕರೆ ಮಾಡಿದ್ದ ಸೋನು ಪೋನಿಯಾ, ನೆಲಮಂಗಲ ಟಿಸಿಐ ಪೆಟ್ರೋಲ್​ ಪಂಪ್​ ಸಮೀಪದ ವೇರ್​ಹೌಸ್​ನಲ್ಲಿ ಕಾರು ಇರಿಸಲಾಗಿದೆ. ದೀಪಕ್​ ಕೌಶಿಕ್​ ನಮಗೆ ಟ್ರಾನ್ಸ್​ಪೋರ್ಟೇಷನ್​ ಹಣ ಕೊಟ್ಟಿಲ್ಲ. ಆದ್ದರಿಂದ ನೀವು ಹಣ ಕೊಟ್ಟರೆ ಕಾರು ಡೆಲಿವರಿ ಮಾಡುವುದಾಗಿ ಹೇಳಿದ್ದ. ಹೀಗಾಗಿ ಬೃಂದಾ ಅವರು ನೆಲಮಂಗಲಕ್ಕೆ ಹೋಗಿ ವೇರ್​ಹೌಸ್​ ಹುಡುಕಾಡಿದರೂ ಪತ್ತೆಯಾಗಿಲ್ಲ. ಆರೋಪಿಗಳ ಮೊಬೈಲ್​ಗೆ ಕರೆ ಮಾಡಿದಾಗ ಸ್ವಿಚ್ಡ್​ ಆಫ್​​​ ಬಂದಿದೆ. ಕೊನೆಗೆ ವಿಆರ್​ಎಲ್​ ಕಂಪನಿ ಹೆಸರಲ್ಲಿ ನಕಲಿ ವೆಬ್​ಸೈಟ್​ ಸೃಷ್ಟಿಸಿ, ವಂಚನೆ ಮಾಡಿರುವುದು ಗೊತ್ತಾಗಿ ಕೊಡಿಗೇಹಳ್ಳಿ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಇನ್ನೊಂದು ಸಂಸ್ಥೆಗೆ ಅರ್ಡರ್​ ಕೊಟ್ಟಿದ್ದ: ಕಾರು ಟ್ರಾನ್ಸ್​ಪೋರ್ಟೇಷನ್​ ಮಾಡುವುದಾಗಿ ಬೃಂದಾ ಅವರಿಂದ ಹಣ ಪಾವತಿಸಿಕೊಂಡಿದ್ದ ದೀಪಕ್​ ಕೌಶಿಕ್​, ಸೇವೆಯಲ್ಲಿರುವ ಹೈದರಾಬಾದ್​ ಟ್ರಾನ್ಸ್​ಪೋರ್ಟೇಷನ್​ ಸಂಸ್ಥೆಯಲ್ಲಿ ಬುಕ್​ ಮಾಡಿದ್ದ. ಅದರಂತೆ ಆ ಸಂಸ್ಥೆಯವರು ರಾಜಮಂಡ್ರಿಯಿಂದ ಕಾರು ತಂದು ಪೀಣ್ಯದ ಗೋದಾಮಿನಲ್ಲಿರಿಸಿದ್ದರು. ನಿಗದಿತ ಶುಲ್ಕ ಪಾವತಿಸದ ಕಾರಣಕ್ಕೆ ಕಾರು ಡೆಲಿವರಿ ಕೊಟ್ಟಿರಲಿಲ್ಲ. ಬೃಂದಾ ಅವರಿಂದ ದೀಪಕ್​ ಕೌಶಿಕ್​ ಹಣ ಪಡೆದಿದ್ದ. ಆದರೆ, ಕಂಪನಿಗೆ ಪಾವತಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!