ಕನ್ನಡ ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೇಜ್: ಸಿಎಂಗೆ ಅಭಿನಂದನೆ ಸಲ್ಲಿಸಿದ ಸುನೀಲ್ ಪುರಾಣಿಕ್

ಬೆಂಗಳೂರು(ಉಡುಪಿ ಟೈಮ್ಸ್ ವರದಿ): ಕನ್ನಡ ಚಿತ್ರೋದ್ಯಮದ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಕರ್ನಾಟಕದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅಭಿನಂದಿಸಿದ್ದಾರೆ. ಕೊರೋನಾ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರೋದ್ಯಮಕ್ಕೆ ಆಸರೆಯಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು.

ಈ ಮನವಿಗೆ ಸ್ಪಂದಿಸಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದ ಕಾರ್ಮಿಕರಿಗ ಪ್ಯಾಕೇಜ್ ನೀಡಿರುವ ಬಗ್ಗೆ ಮುಖ್ಯಮಂತ್ರಿಗೆ ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷದೊಂದಿಗೆ ಮುಖ್ಯಮಂತ್ರಿಯವರು ಎಲ್ಲರಿಗೂ ಕೊರೋನಾ ಸಂಕಷ್ಟದಲ್ಲಿ ಕೈಹಿಡಿದಿದ್ದಾರೆ. ಮೊದಲ ಪ್ಯಾಕೇಜ್ ನಲ್ಲಿ ಚಿತ್ರೋದ್ಯಮಕ್ಕೆ ಪ್ಯಾಕೇಜ್ ಕೈತಪ್ಪಿತ್ತು. ಆದರೆ ತಾವು ಮಾಡಿದ ಮನವಿಗೆ ಅವರು ಇದೀಗ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಕೊರೋನಾ ಸಂದರ್ಭದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಮುಖ್ಯಮಂತ್ರಿಯವರು ವಿಶೇಷ ಕಾಳಜಿಯಿಂದ ಆಹಾರ ಸಾಮಗ್ರಿಗಳ ಖರೀದಿಗೆ ಸಂಕಷ್ಟದಲ್ಲಿದ್ದ ಚಿತ್ರರಂಗದ 6500 ಮಂದಿಗೆ ತಲಾ ರೂ.3000 ಮೌಲ್ಯದ ದಿನಸಿ ಕೂಪನ್ ನೀಡಿದ್ದು ಅಲ್ಲದೆ, ಇತ್ತೀಚಿಗೆ ಚಿತ್ರೋದ್ಯಮದವರಿಗಾಗಿ ವಿಶೇಷವಾಗಿ ಲಸಿಕೆಯನ್ನೂ ನೀಡಿ ಸಹಾಯ ಮಾಡಿದ್ದಾರೆ. ಇದನ್ನು ಕನ್ನಡ ಚಿತ್ರೋದ್ಯಮ ಸ್ಮರಿಸುತ್ತದೆ ಎಂದು ಸುನೀಲ್ ಪುರಾಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!