ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಆದಾಯ ದುರ್ಬಳಕೆ ಆರೋಪ ಸತ್ಯಕ್ಕೆ ದೂರವಾದುದ್ದು- ದೇವಳದ ವ್ಯವಸ್ಥಾಪನಾ ಸಮಿತಿ ಸ್ಪಷ್ಟಣೆ

ಉಡುಪಿ, ಅ.11 : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆದಾಯವನ್ನು ಅನಗತ್ಯವಾಗಿ ಸರಕಾರದ ಇತರ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಭಕ್ತಾಧಿಗಳು ಈ ಸುಳ್ಳು ಸುದ್ದಿಯನ್ನು ನಂಬಬಾರದು. ದೇವಸ್ಥಾನಕ್ಕೆ ಬರುವ ಭಕ್ತರ ಹಣವನ್ನು ಸದುದ್ದೇಶಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಕಾನೂನು ತಜ್ಞರಿಂದ ಸಲಹೆಯನ್ನು ಪಡೆದುಕೊಂಡು ಈ ರೀತಿ ಕಪೋಲಕಲ್ಪಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಭಕ್ತರನ್ನು ಗೊಂದಲಕ್ಕೆ ಸಿಲುಕಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಬರುವ ಭಕ್ತರು ನೀಡುವ ಸೇವೆ, ಕಾಣಿಕೆ ಹಾಗೂ ಇತರ ಮೂಲಗಳಿಂದ ಸಂಗ್ರಹವಾಗುವ ಒಟ್ಟು ಮೊತ್ತವನ್ನು ದೇವಳದ ದೈನಂದಿನ ಹಾಗೂ ವಿಶೇಷ ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಿ, ಉಳಿಕೆಯಾದ ಹಣವನ್ನು ದೇವಳದ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ನಿರಖು ಠೇವಣೆಯನ್ನು ಇರಿಸಲಾಗುವುದು. ಸರಕಾರದ ಒಪ್ಪಿಗೆಯನ್ನು ನಿಯಮಾನುಸಾರ ಪಡೆದುಕೊಂಡು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಇತರ ಅಗತ್ಯ ವೆಚ್ಚಗಳಿಗೆ ಮಾತ್ರ ದೇವಸ್ಥಾನದ ಆದಾಯವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

ಹಾಗೂ 2021-22 ರಲ್ಲಿ 1,11,12,623, 2022-23 ರಲ್ಲಿ 18,44,56,572, 2023-24ರಲ್ಲಿ 16,78,58,523., 2024-25ರಲ್ಲಿ 14,97,93,022. ಹಣವನ್ನು ದೇವಳದ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇರಿಸಲಾಗಿದೆ. ಪ್ರಸ್ತುತ ದೇವಳದ ಹೆಸರಿನಲ್ಲಿ 190,36,78,725ರೂ. ಮೊತ್ತದ ನಿರಖು ಠೇವಣೆ ಇದೆ. ಸರಕಾರದಿಂದ ಕಳೆದ ಮೂರು ವರ್ಷಗಳಲ್ಲಿ ತಸ್ತೀಕ್ ಮತ್ತು ವರ್ಷಾಸನ ದೇವಳದ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತ 2021-22ರಲ್ಲಿ ತಸ್ತೀಕ್- 36,000ರೂ, ವರ್ಷಾಸನ- 1,43,023 ರೂ.,  2022-23 ರಲ್ಲಿ ತಸ್ತಿಕ್ 12,000 ರೂ.  ವರ್ಷಾಸನ 1,23,100ರೂ., 2023-24ರಲ್ಲಿ  ತಸ್ತಿಕ್ 61,600 ರೂ. ವರ್ಷಾಸನ 61,600 ರೂ. ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!