ಅ.26-27-ಗೋವಾದಲ್ಲಿ ಅಖಿಲ ಭಾರತ ಕೊಂಕಣಿ ಪರಿಷದ್‌ನ 33ನೇ ಅಧಿವೇಶನ

ಉಡುಪಿ ಅ.07(ಉಡುಪಿ ಟೈಮ್ಸ್ ವರದಿ): ಅಖಿಲ ಭಾರತ ಕೊಂಕಣಿ ಪರಿಷದ್‌ನ 33ನೇ ಅಧಿವೇಶನ ಗೋವಾದ ಮಡ್ಗಾಂವ್, ರವೀಂದ್ರಭವನದಲ್ಲಿ ಅ. 26 ಮತ್ತು 27 ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಶಾಂತ್ ನಾಯಕ್ ಅವರು ತಿಳಿಸಿದ್ದಾರೆ. 

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಎರಡು ದಿನಗಳ ಕಾರ್ಯಕ್ರಮವನ್ನು ಅ.26ರ ಬೆಳಗ್ಗೆ ಹಿರಿಯ ಬರಹಗಾರ ಮತ್ತು ಭಾಷಾ ವಿದ್ವಾಂಸರಾದ ಡಾ. ಗಣೇಶ ದೇವಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪರಿಷದ್‌ನಲ್ಲಿ ಕೊಂಕಣಿ ಶಿಕ್ಷಣ, ಭಾಷೆಯ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಬಳಕೆ ಇತ್ಯಾದಿಗಳನ್ನು ಒಳಗೊಂಡ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಹಾಗೂ ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಹಾಗೂ ರೆ। ಮೌಝಿನೋ ಅತಾಡೆ ಅವರು ಪರಿಷದಿನ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದು, ಎರಡು ವರ್ಷಗಳ ಕಾಲ ಈ ಹುದ್ದೆಯನ್ನು ಹೊಂದಿರುತ್ತಾರೆ. ಕೊಂಕಣಿ ಭಾಷಾ ಮಂಡಳದ ಮಾಜಿ ಅಧ್ಯಕ್ಷ ಪ್ರಶಾಂತ್ ನಾಯಕ್ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ಮತ್ತು ಅನಂತ ಅಗ್ನಿ, ಮಂಗಲ್‌ದಾಸ್ ಭಟ್ ಅವರು ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿದ್ದಾರೆ. ಜೊತೆಗೆ ಪರಿಷದಿನ ಕಾರ್ಯಾಧ್ಯಕ್ಷ ಚೇತನ್ ಅಚಾರ್ಯ, ಪ್ರಶಾಂತ್ ನಾಯಕ್ ಮತ್ತು ಸುದೀನ್ ಲೊಲಿಯೇಕರ್ ಅವರನ್ನು ಒಳಗೊಂಡ ನಿಯೋಗ ಪ್ರತಿನಿಧಿಗಳನ್ನು ಆರಿಸುವ ಸಲುವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

1939ರಲ್ಲಿ ಸ್ವರ್ಗೀಯ ಮಾಧವ ಮಂಜುನಾಥ ಶಾನುಭಾಗ್ ಅವರು ಸ್ಥಾಪಿಸಿದ ಪರಿಷದ್ ಕೊಂಕಣಿ ಭಾಷೆ ಮತ್ತು ಅದರ ಜನರ ಅಭಿವೃದ್ಧಿಯತ್ತ ಕಾರ್ಯನಿರ್ವಹಿಸುತ್ತಿದೆ. ಆಯೋಜಕರು ಕರ್ನಾಟಕದ ಕೊಂಕಣಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪರಿಷದಿಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪರಿಷದಿನ ಕಾರ್ಯಾಧ್ಯಕ್ಷ ಚೇತನ್ ಅಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!