ಉಡುಪಿ ಸಿಂಡಿಕೇಟ್ ಕ್ರೆ. ಸೌ. ಕೋ-ಆ. ಸೊಸೈಟಿ: ದಿನಸಿ ಸಾಮಗ್ರಿ ವಿತರಣೆ

ಬ್ರಹ್ಮಾವರ ಸೆ.27(ಉಡುಪಿ ಟೈಮ್ಸ್ ವರದಿ): ಉಡುಪಿಯ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಎರಡನೇ ವರ್ಷ ಪಾದರ್ಪಣೆಗೊಂಡ ಹಿನ್ನೆಲೆಯಲ್ಲಿ ಸ್ನೇಹಾಲಯ ಬ್ರಹ್ಮಾವರ ಇಲ್ಲಿ  ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಜೀವನ್ ಡಿಸೋಜ ಅವರು ಮಾತನಾಡಿ, ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮೂಲ ಉದ್ದೇಶ ಮತ್ತು ಪ್ರೇರಣೆ ದಿ. ಫಾ ವಲೇರಿಯನ್ ಮೆಂಡೋನ್ಸ. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಚಿಂತನೆ ಮತ್ತು ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿ ನಮ್ಮನ್ನು ಪ್ರೇರೇಪಿಸಿದ್ದರು. ಇವರ ಅಗಲುವಿಕೆ ನಮಗೆ ತುಂಬಲಾಗದ ನಷ್ಟವಾಗಿದೆ. ಅದರ ಸಲುವಾಗಿ ಈ ಕಾರ್ಯಕ್ರಮದ ಎಲ್ಲಾ  ಶ್ರೇಯಸ್ಸು ದಿ. ಫಾ ವಲೇರಿಯನ್ ಮೆಂಡೋನ್ಸ ಇವರಿಗೆ ಅರ್ಪಿಸುತ್ತೇನೆ. ಅವರಿಗೆ ಗೌರವ ಸಮರ್ಪಣೆಯಿಂದ ನಾವು ಮೊದಲು ಮಾನಸ ಪುನರ್ವಸತಿ ಕೇಂದ್ರ ಪಾಂಬೂರು ಇಲ್ಲಿನ ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದು ಮತ್ತು  ಎರಡನೆಯದಾಗಿ ವಿನ್ಸೆಂಟ್  ಪಲ್ಲೊಟ್ಟಿ ಕಾನ್ವೆಂಟ್ ಉದ್ಯಾವರದಲ್ಲಿ ಆಚರಿಸಿಕೊಂಡು ಇಂದು ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸೈಂಟ್ ಮೇರಿಸ್ ಕ್ಯಾಥೆಡ್ರಲ್ ಬ್ರಹ್ಮಾವರ ಇಲ್ಲಿನ ಧರ್ಮ ಗುರುಗಳಾದ ಫಾ. ಲಾರೆನ್ಸ್ ಡೆವಿಡ್ ಕ್ರಾಸ್ತ ಇವರು ಮಾತನಾಡಿ, ದಿ. ವಲೆರಿಯನ್ ಮೆಂಡೋನ್ಸ ಇವರು ನುಡಿದಂತೆ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ. ಸಂಸ್ಥೆಯು ಅನಾಥರು ಮತ್ತು ಹಿರಿಯರ ಮೇಲೆ ಗೌರವವಿಟ್ಟು ಇಂದು ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದಕ್ಕೆ ಧನ್ಯವಾದ ತಿಳಿಸುತ್ತ, ಸಂಸ್ಥೆಯು ಬೆಳೆಯುತ್ತಾ ಇತರರನ್ನು ಬೆಳೆಸಿಕೊಂಡು ಸಾಗಲಿ ಎಂದು ಶುಭ ಹಾರೈಸಿದರು. 

ಸಾಮಾಜಿಕ ಕಾರ್ಯಕರ್ತ ಮತ್ತು  ರೋಟರಿ ಕ್ಲಬ್ ಬ್ರಹ್ಮಾವರ ಇದರ ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಅಂದ್ರಾದೆ ಅವರು ಮಾತನಾಡಿ, ಸಂಸ್ಥೆಯು ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಮತ್ತು ದಿ. ಫಾ ವಲೇರಿಯನ್ ಮೆಂಡೋನ್ಸ ಇವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದಕ್ಕೆ ಸಂತೋಷವಾಗಿದೆ. ನಾಟಕ ಜೀವನ ನಡೆಸಲು ಅಸಾಧ್ಯ ಅದು ನಾಟಕವೇ ಹೊರತು ಜೀವನ ಅಲ್ಲ ನಾವು ಎಲ್ಲರು ಇಲ್ಲಿ ಬಂಧುಗಳು ಎಂದು ಹೇಳಿದರು. ಈ ಸಂಸ್ಥೆಯು ಇನ್ನು ಹೆಚ್ಚಿನ  ಅನೇಕ ರೀತಿಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಸೆಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿ ಇಲ್ಲಿನ ಪಾಲನಮಂಡಳಿಯ  ಉಪಾಧ್ಯಕ್ಷರು ಮತ್ತು ಗ್ರಾಂ. ಪಂ. ಸದಸ್ಯ ಅಶ್ವಿನ್ ರೋಚ್ ಇವರು ಮಾತನಾಡಿ ಸಂಸ್ಥೆಯ ಏಳಿಗೆಯ ಬಗ್ಗೆ ಶ್ಲಾಘಿಸಿದರು ಹಾಗೂ ಇಂತಹ ಸಮಾಜಮುಖಿ ಕಾರ್ಯಗಳಿಗೆ ಭಾಗವಹಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಲ್ಲಿ ನಮಗೆ ನಾವೇ ಎಲ್ಲ. ನಮ್ಮ ಪಾಲಕರೇ ನಮ್ಮ ಸಂಬಂಧಿಗಳು ನಮ್ಮ ಶುಭ ಹಾರೈಕೆದಾರರು. ಅವರು ನಡೆಸಿದಂತೆ ನಡೆದು ಕೊಂಡು ಜೀವನ ಸಾಗಿಸಬೇಕು. ಸಿಟ್ಟು ಕೋಪ ಹಠ ಇದರಿಂದಾಗಿ ಸಂತೋಷ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಕಿವಿ ಮಾತು ಹೇಳಿದರು. 

ಈ ಸಂದರ್ಭದಲ್ಲಿ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ನ ಲೆಕ್ಕ ವ್ಯವಸ್ಥಾಪಕ ಕುಮಾರ್ ಹೆಚ್ ಎನ್. ಕಿರಿಯ ಸಹಾಯಕರಾದ ರೇಶ್ಮಾ ಎ ಕುಮಾರಿ. ಸಂಸ್ಥೆಯ ಪರಿಚಾರಕರಾದ (ಅಟೆಂಡರ್) ವಿವಿಯನ್ ಮರ್ವಿನ್ ನೊರೊನ್ಹಾ ಹಾಗೂ ಸ್ನೇಹಾಲಯ ಬ್ರಹ್ಮಾವರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!