ಪಿತೃ ದೋಷ ಪರಿಹಾರಕ್ಕೆ ಹೆತ್ತವರನ್ನೇ ಕೊಂದ ಅಪ್ರಾಪ್ತ ವರ್ಷದ ಪುತ್ರ

ಬೆಂಗಳೂರು, ಮೇ. 08 (ಉಡುಪಿ ಟೈಮ್ಸ್ ವರದಿ): ತನಗೆ ಪಿತೃ ದೋಷವಿದ್ದೂ, ತನ್ನ ತಂದೆಯ ಸಾವಿನಿಂದ ತನ್ನ ಬದುಕು ಸುಂದರವಾಗುವುದು ಎಂದೂ ಡೋಂಗಿ ಜ್ಯೋತಿಷಿಯ ಮಾತು ಕೇಳಿ ಹದಿನಾಲ್ಕು ವರ್ಷದ ಪುತ್ರ ತನ್ನ ತಂದೆ ತಾಯಿಯನ್ನು ಕಲ್ಲಿಂದ ಜಜ್ಜಿ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ . ಸಂಖ್ಯಾ ಸಂಗ್ರಹಣಾಧಿಕಾರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಹನುಮಂತರಾಯ (45) ಹೊನ್ಮಮ್ಮ (34 ) ಎಂಬವರೇ ಪುತ್ರನಿಂದ ಕೊಲೆಗೀಡಾದ ದುರ್ದೈವಿಗಳು. ಗಾಂಜಾ ಮತ್ತಿನಲ್ಲಿ ಜನ್ಮ ಕೊಟ್ಟ ತಂದೆ ತಾಯಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಬಾಲಕ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.

ಎರಡು ದಿನದ ಹಿಂದೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು. ಕಚೇರಿಯ ಬಾತ್ ರೂಮ್ ನಲ್ಲಿ ಬಿದ್ದಿದ್ದ ಎರಡು ದೇಹದ ಮೇಲೆ ಕಲ್ಲಿನಿಂದ ಜಜ್ಜಿ ಗಾಯಗಳಾಗಿದ್ದವು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಜೋಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರದವರಾಗಿದ್ದ ದಂಪತಿ ಕರಿಹೋಬನಹಳ್ಳಿಯ ಬೃಂದಾವನ ನಗರದ ಕಚೇರಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಕೆ.ಎ.ಎಸ್. ಅಧಿಕಾರಿಯ ಚೇಂಬರ್ ನ ವಾಷ್ ರೂಂನಲ್ಲಿ ಬಿಸಾಡಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೀಣ್ಯ ಪೊಲೀಸರು, ಹನುಮಂತರಾಯ ಮತ್ತು ಹೊನ್ನಮ್ಮ ಎರಡನೇ ಪುತ್ರನನ್ನು ಬಂಧಿಸಿ ಬಾಲಕರ ಬಾಲ ಮಂದಿರಕ್ಕೆ ಒಪ್ಪಿಸಿದ್ದಾರೆ. ಗಾಂಜಾ ಸೇವನೆ ದಾಸನಾಗಿದ್ದ ಈತ ಜ್ಯೋತಿಷಿಯನ್ನು ಭೇಟಿ ಮಾಡಿ ಶಾಸ್ತ್ರ ಕೇಳಿದ್ದ. ನೀನು ಚೆನ್ನಾಗಿ ಇರಬೇಕಾದರೆ ನಿಮ್ಮ ತಂದೆ ಸಾಯಬೇಕು. ನಿನಗೆ ಪಿತೃದೋಷವಿದೆ ಹೇಳಿದ್ದ. ಇದನ್ನೇ ನಂಬಿದ್ದ ಹದಿನಾಲ್ಕು ವರ್ಷದ ಪುತ್ರ ತಂದೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಗುರವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿನಲ್ಲಿ ಗಾಂಜಾ ಮತ್ತಿನಲ್ಲಿ ತಂದೆಯನ್ನು ಕೊಲೆ ಮಾಡಿದ್ದಾನೆ. ತಡೆಯಲು ಬಂದ ತಾಯಿಯನ್ನೂ ಹತ್ಯೆ ಮಾಡಿದ್ದಾನೆ. ಎರಡು ದೇಹವನ್ನು ವಾಷ್ ರೂಮ್ ನಲ್ಲಿ ಹಾಕಿ ಕೀ ಹಾಕಿದ್ದಾನೆ. ನಂತರ ಕೀಯನ್ನು ತನ್ನ ಪ್ಯಾಂಟ್ ಜೇಬಿನಲ್ಲಿ ಬಚ್ಚಿಟ್ಟಿದ್ದ. ತಾಯಿ ಕೊಲೆಯ ಬಗ್ಗೆ ಮೊದಲನೇ ಪುತ್ರ ಪ್ರಕಾಶ್ ಎಂಬಾತ ದೂರು ನೀಡಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೀ ಕೊಟ್ಟ ಸುಳಿವಿನ ಮೇರೆಗೆ ಅಪ್ರಾಪ್ತ ಬಾಲಕನ್ನು ವಶಕ್ಕೆ ಪಡೆದು ಬಾಲಕರ ಬಾಲಮಂದಿರಕ್ಕೆ ಬಿಟ್ಟಿದ್ದಾರೆ. ಈತ ನೀಡಿದ ಮಾಹಿತಿ ಮೇರೆಗೆ ಜ್ಯೋತಿಷಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!