ಮಣಿಪಾಲ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

ಮಣಿಪಾಲ ಮೇ 24: ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಣಿಪಾಲದ ಈಶ್ವರನಗರದಲ್ಲಿ ನಡೆದಿದೆ.

ಕುಕ್ಕೆಹಳ್ಳಿ ಗ್ರಾಮದ ರಘುರಾಮ ಕುಲಾಲ್(50) ಮೃತಪಟ್ಟವರು. ಕಟ್ಟಡದ 4ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಬಕೆಟ್ ತರಲು ಕಟ್ಟಡದ ಹೊರಮೈಯ ಪ್ಯಾರಾಪೀಟ್ ಮೇಲೆ ಕಾಲು ಇಟ್ಟಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ 50 ಅಡಿ ಆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ರಘುರಾಮ ಕುಲಾಲ್ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. 

ಈ ಘಟನೆಗೆ ಸಂಬಂಧಿಸಿ ಕಟ್ಟಡದ ಮಾಲಕ ಗಣೇಶ ಮತ್ತು ಕಟ್ಟಡದ ಗುತ್ತಿಗೆದಾರ ಅಮರೇಶರವರು ಕಟ್ಟಡದ ಗಾರೆ ಕೆಲಸ ಮಾಡುವ ವೇಳೆ ಮುಂಜಾಗೃತ ದೃಷ್ಠಿಯಿಂದ ಯಾವುದೇ ಸುರಕ್ಷತಾ ಸಾಧನಗಳನ್ನು ಅಳವಡಿಸದೇ ಇದ್ದುದರಿಂದ ಈ ಘಟನೆ ನಡೆದಿದೆ ಎಂದು ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!