ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು : ಪರಿಸ್ಥಿತಿ ನಿಯಂತ್ರಣಕ್ಕಾಗಿ ಸಂಸದೆ ಕರಂದ್ಲಾಜೆಯಿಂದ ಮುಖ್ಯ ಮಂತ್ರಿಗಳಿಗೆ ಪತ್ರ

ಬೆಂಗಳೂರು (ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ಪ್ರಕರಣಗಳು ಹಾಗೂ ಪರಿಸ್ಥಿತಿ ಬಿಗಡಾಯಿಸುತ್ತಿರುವ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಉಡುಪಿ- ಚಿಕ್ಕ ಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸುದೀರ್ಘ ಪತ್ರ ಬರೆದಿದ್ದು ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಯಾಚಿಸಿದ್ದಾರೆ. ಸುಮಾರು 13 ಅಂಶಗಳನ್ನು ಹೊಂದಿರುವ ಈ ಪತ್ರದಲ್ಲಿ ಜನರ ಸಮಸ್ಯೆಗಳನ್ನು ಉಲ್ಲೇಖಿಸಲಾಗಿದೆ.

ಕರಂದ್ಲಾಜೆ ತಮ್ಮ ಪತ್ರದಲ್ಲಿ ಕರ್ನಾಟಕದಲ್ಲಿ ಕೋವಿಡ್-19 ಹೆಚ್ಚೆಚ್ಚು ಜನರಿಗೆ ಹಬ್ಬುತ್ತಿದೆ. ಈಗಾಗಲೇ ದಿನವೊಂದಕ್ಕೆ 29,000 ಕೇಸುಗಳು ದಾಖಲಾಗುತ್ತಿದ್ದು, ಬರುವ 15 ದಿನಗಳಲ್ಲಿ ಪರಿಸ್ಥಿತಿಯು ಕೈಮೀರಿ ಹೋಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ. ರಾಜ್ಯಕ್ಕೆ ಹೊರ ರಾಜ್ಯಗಳಿಂದಲೂ ಕೋವಿಡ್ ಬಾಧಿತ ವ್ಯಕ್ತಿಗಳು ಬರುತ್ತಿದ್ದು, ಅವರ ಕುಟುಂಬಗಳಿಗೂ ಪಾಸಿಟಿವ್ ಬಂದರೆ ಈಗಿರುವ ಕೇಸುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ನೆಲೆಸಿರುವ ರಾಜ್ಯದ ಬೇರೆ ಬೇರೆ ಭಾಗಗಳ ಜನರು ವಲಸೆ ಹೋಗುತ್ತಿದ್ದು, ಆಯಾ ಜಿಲ್ಲೆಗಳಲ್ಲೂ ಕೋವಿಡ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಜನರು ಆತಂಕ್ಕೊಳಗಾಗುತ್ತಿದ್ದಾರೆ.

ಜನಸಾಮಾನ್ಯರ ಭಾವನೆಗಳು, ಸಮಸ್ಯೆಗಳನ್ನು ಕೇಳಿದಾಗ ನನಗೆ ಬಂದ ಅನಿಸಿಕೆ, ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಿಮ್ಮ ಅನುಮತಿಯನ್ನು ಕೋರುತ್ತಿದ್ದೇನೆ.

  1. ಈಗಿರುವ ಹೆಲ್ಪ್ ಲೈನುಗಳಲ್ಲಿ ಫೋನ್ ಸಿಗುತ್ತಿಲ್ಲ, ಗಂಟೆಗಟ್ಟಲೆ ಕಾಯಬೇಕು ಎಂಬ ದೂರು ಜನರದ್ದು.
    ಈಗಿರುವ ಹೆಲ್ಪ್ ಲೈನುಗಳು ಹಿಂದೆ ನಾವೇ ಮಾಡಿದ ವಿದ್ಯುತ್ ಇಲಾಖೆಯ ಬೆಸ್ಕಾಂ ಹೆಲ್ಪ್ ಲೈನುಗಳು. ಈ 60 ಲೈನುಗಳ ಪೈಕಿ 30ನ್ನು BBMP ಪಡೆದು ಕೋವಿಡ್ ಹೆಲ್ಪ್ ಲೈನಾಗಿ ಮಾಡಿದೆ. ಆದರೆ ಬರುವ ಕೇಸುಗಳನ್ನು ನೋಡಿದರೆ ಹೆಲ್ಪ್ ಲೈನುಗಳು ಸಾಕಾಗುತ್ತಿಲ್ಲ, ಫೋನ್ ಸಿಗುತ್ತಿಲ್ಲ.
    ಈ 30 ಲೈನುಗಳನ್ನು 100ಕ್ಕೆ ಏರಿಸಿ 24*7 ಆಗಿ, 3 ಪಾಳಿಯಲ್ಲಿ ಕೆಲಸವನ್ನು ವೃತ್ತಿಪರರಿಗೆ ಹಂಚಿಕೆ ಮಾಡಬೇಕು ಎಂದು ಈ ಮೂಲಕ ಕೋರುತ್ತಿದ್ದೇನೆ.
  2. ಬರುವ ದಿನಗಳಲ್ಲಿ ವೆಂಟಿಲೇಟರ್ ಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಬೇಕಾಗಬಹುದು. ಬೆಂಗಳೂರಿನಲ್ಲಿ ಈಗಿರುವ ವೆಂಟಿಲೇಟರ್ ಗಳಿಗೆ ಹೆಚ್ಚುವರಿಯಾಗಿ 1000 ವೆಂಟಿಲೇಟರುಗಳು ಹಾಗು ರಾಜ್ಯದ ಇತರ ಭಾಗಗಳಲ್ಲಿ 1000 ದಷ್ಟು ವೆಂಟಿಲೇಟರುಗಳಿಗೆ ಹೆಚ್ಚಿಸಬೇಕು. ಚಿಕ್ಕ ಚಿಕ್ಕ ಅಸ್ಪತ್ರೆಗಳನ್ನು ಗುರುತಿಸಿ, ಅಲ್ಲಿ ಸರಕಾರ ಹಣಸಹಾಯವನ್ನು ಒದಗಿಸಿ ಅವರಲ್ಲಿನ ವೆಂಟಿಲೇಟರ್ ಸಂಖ್ಯೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸಬೇಕು.
  3. ಇದೊಂದು ಆರೋಗ್ಯ/ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ ರಾಜ್ಯಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆಗಳ 50% ಬೆಡ್ಡುಗಳನ್ನು ಪಡೆಯಲು ಕ್ರಮಕೈಗೊಳ್ಳುವುದು, ಅದಕ್ಕಾಗಿ ಒಂದು ಕಾರ್ಯಪಡೆಯನ್ನು ನೇಮಿಸಿವುದು.
  4. ನಮ್ಮ ರಾಜ್ಯದಲ್ಲಿ ವೆಂಟಿಲೇಟರ್ ಉತ್ಪಾಧಿಸುವ ಉದ್ಯಮಿಗಳಿದ್ದಾರೆ, ಅಂತಹ ಉದ್ಯಮಗಳಿಗೆ ಸರಕಾರದ ವತಿಯಿಂದ ಮುಂಗಡಹಣವನ್ನು ನೀಡಿ ರಾಜ್ಯಕ್ಕೆ ಅಗತ್ಯವಿರುವ ವೆಂಟಿಲೇಟರ್ ಗಳನ್ನು ತುರ್ತಾಗಿ ನಿರ್ಮಿಸಿಕೊಡುವಂತೆ ವಿನಂತಿಸಿಕೊಳ್ಳುವುದು.

ಉದಾ: ಮೈಸೂರಿನಲ್ಲಿರುವ ಸನ್ರೇ ಎಂಬ ವೆಂಟಿಲೇಟರ್ ಉತ್ಪಾಧಿಸುವ ಸಂಸ್ಥೆಯು ಕೇಂದ್ರ ಸರಕಾರಕ್ಕೆ ಕಳೆದ ಒಂದು ವರ್ಷದಲ್ಲಿ 30,000ಕ್ಕೂ ಅಧಿಕ ವೆಂಟಿಲೇಟರ್ಸ್ ಗಳನ್ನ ಪೂರೈಕೆ ಮಾಡಿರುತ್ತದೆ, ಕರ್ನಾಟಕ ಸರಕಾರವು ಕಳೆದ ವರ್ಷ 1000 ವೆಂಟಿಲೇಟರ್ಸ್ ಗೆ ಬೇಡಿಕೆ ಸಲ್ಲಿಸಿದ್ದು ಅದರಲ್ಲಿ ಕೇವಲ 130ನ್ನು ಮಾತ್ರ ಖರೀದಿಸಿದೆ. ರಾಜ್ಯದ ಅರೋಗ್ಯ ಇಲಾಖೆ ಈಗಲಾದರೂ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ರಾಜ್ಯದ ಎಲ್ಲ ವೆಂಟಿಲೇಟರ್ ಹಾಗು ಆಕ್ಸಿಜನ್ ಉತ್ಪಾದಕರಿಗೆ ಪ್ರೋತ್ಸಾಹವನ್ನು ನೀಡಿ ಅವರಿಂದ ಅಗತ್ಯದ ಉಪಕರಣಗಳನ್ನು ತಕ್ಷಣದಲ್ಲಿ ಖರೀದಿಸಲು ಕ್ರಮ ಕೈಗೊಳ್ಳಬೇಕು.

  1. ಪ್ರತಿದಿನ ಎಷ್ಟು ರೆಮಿಡಿಸಿವರ್ ಹಾಗೂ ಆಕ್ಸಿಜನ್ ಲಭ್ಯತೆಯಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸುವುದು, ಇರುವ ರೋಗಿಗಳು ಎಷ್ಟು ಮತ್ತು ಇವರಿಗೆ ಬೇಕಾಗಿರುವ ರೆಮಿಡಿಸಿವರ್ ಮತ್ತು ಆಕ್ಸಿಜನ್ ಎಷ್ಟು ಎಂಬುವುದನ್ನು ಪ್ರಕಟಗೊಳಿಸಿದರೆ ಜನರು ಆತಂಕಕ್ಕೆ ಈಡಾಗುವುದನ್ನು ತಪ್ಪಿಸಿಬಹುದು.
  2. ಜನರಲ್ಲಿರುವ ಆತಂಕದಿಂದ ತೀರ ಅಗತ್ಯವಿಲ್ಲದೆ ಇರುವ ರೋಗಿಗಳು ಕೂಡಾ ಅಸ್ಪತ್ರೆಗಳಲ್ಲಿ ಬರ್ತಿಯಾಗುವ ಅವಸರವನ್ನು ತೋರಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಪ್ರತಿ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಮಾಡಿ ಒಬ್ಬ ಡಾಕ್ಟರ್ ಹಾಗೂ ಅಧಿಕಾರಿಗಳ ತಂಡ ರೋಗಿಗಳಿಗೆ ಒಳರೋಗಿಯಾಗುವ ಅವಶ್ಯಕತೆಯಿದೆಯೇ ಎಂದು ಪರೀಕ್ಷಿಸಬೇಕು, ಮನೆಯಲ್ಲಿ ಕ್ವಾರಂಟೈನ್ ಆದರೆ ಸಾಕಾಗುವ ರೋಗಿಗಳಿಗೆ ಸರಿಯಾದ ಸಲಹೆ ಹಾಗೂ ಔಷಧಗಳನ್ನು ನೀಡಿದರೆ ಆಸ್ಪತ್ರೆಯಲ್ಲಿ ಉಂಟಾಗುವ ಗಲಿಬಿಲಿಗಳನ್ನು ತಪ್ಪಿಸಬಹುದು. ಇದರಿಂದ ಅತೀ ಅಗತ್ಯವಿರುವವರಿಗೆ ಬೆಡ್, ಆಕ್ಸಿಜನ್ ಹಾಗೂ ವೆಂಟಿಲೇಟರ್ ಗಳ ಅಭಾವಾಗುವುದನ್ನು ತಪ್ಪಿಸಬಹುದು.
  3. ರೋಗಿಗಳನ್ನು ಬೆಂಗಳೂರು ನಗರದ ವಾರ್ಡುಗಳಲ್ಲಿ, ಗ್ರಾಮೀಣ ಭಾಗದ ತಾಲೂಕುಗಳ ಆಯಾ ಸ್ಥಳದಲ್ಲೇ ಪರೀಕ್ಷಿಸುವ ಕೆಲಸ ಆಗಬೇಕಾಗಿದೆ. ಪ್ರತೀ ವಾರ್ಡ್ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಹಾಗು ನಿಯೋಜಿತ ಸರಕಾರಿ ಅಧಿಕಾರಿಗಳು ರೋಗಿಗಳನ್ನು ಪರೀಕ್ಷಿಸಿ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಮಾತ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಆಯಾ ಡಾಕ್ಟರುಗಳ ಶಿಫಾರಸ್ಸಿನ ಮೇಲೆ ದಾಖಲು ಮಾಡಬೇಕು.
  4. ಕೋವಿಡ್ ಬಾಧಿಸಿ ಮೃತರಾದವರನ್ನು ಶವಾಗರದಲ್ಲಿ ಇಟ್ಟು ಟೋಕನ್ ವ್ಯವಸ್ಥೆಯ ಮೂಲಕ ಸಂಬಂಧಿಸಿದ ಚಿತಾಗಾರಗಳಲ್ಲಿ ನಿಗದಿತ ಸಮಯದಲ್ಲಿ ಹೋಗುವ ರೀತಿಯ ವ್ಯವಸ್ಥೆಗಳನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಆಂಬುಲೆನ್ಸ್ ಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಬಹುದು, ಮತ್ತು ಜನರಲ್ಲಿ ಮನೆಮಾಡಿರುವ ಆತಂಕವನ್ನು ಕಡಿಮೆ ಮಾಡಬಹುದು.
  5. ಕೊರೋನಾ ಕಾರಣದಿಂದ ಮರಣ ಹೊಂದಿದವರಿಗೆ ಸರಕಾರ ರಾಜ್ಯಾದ್ಯಂತ ಉಚಿತ ಉಚಿತ ಆಂಬುಲೆನ್ಸ್ ಗಳ ವ್ಯವಸ್ಥೆಯನ್ನು ಮಾಡಬೇಕು. ಇತರೆ ಖಾಯಿಲೆಗಳು ಹಾಗು ಸಹಜ ಮರಣ ಹೊಂದಿದವರಿಗೆ ನಿಗದಿಪಡಿಸಿದ ದರದಲ್ಲಿ ಆಂಬುಲೆನ್ಸ್ ಸೇವೆ ದೊರೆಯುವಂತೆ ಸರಕಾರ ಖಚಿತಪಡಿಸಿಕೊಳ್ಳಬೇಕು. ಇದಾಗಿಯೂ ಹೆಚ್ಚು ದರವನ್ನು ತೆಗೆದುಕೊಳ್ಳುವ ಖಾಸಗಿ ಆಂಬುಲೆನ್ಸ್ ಗಳನ್ನು ಸರಕಾರ ಮುಟ್ಟುಗೋಲು ಹಾಕಬೇಕು.
  6. ಬರುವ ದಿನಗಳಲ್ಲಿ ಹೆಚ್ಚಿನ ಬೆಡ್, ವೆಂಟಿಲೇಟರ್ ಗಳ ಅವಶ್ಯಕತೆ ಉಂಟಾಗುವ ನಿಟ್ಟಿನಲ್ಲಿ ಈಗಿಂದೀಗಲೇ ನಗರಗಳ ವಾರ್ಡ್, ತಾಲೂಕು ಮಟ್ಟಗಳಲ್ಲಿ ಲಭ್ಯವಿರುವ ಶಾಲಾ, ಕಾಲೇಜು, ಹಾಸ್ಟೆಲ್, ಹೋಟೆಲ್ ಗಳಲ್ಲಿ ವ್ಯವಸ್ಥೆಗಳನ್ನು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವಿಂನತಿಸುತ್ತಿದ್ದೇನೆ.
  7. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕೇವಲ ಹಣವಂತರು ಹಾಗೂ ಪ್ರಭಾವಿಗಳು ಹೋಗುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ, ಯಾವ ರೋಗಿಗೆ ಯಾವ ರೀತಿಯ ಚಿಕಿತ್ಸೆಯ ಅಗತ್ಯವಿದೆಯೆಂದು ಆಸ್ಪತ್ರೆಗಳಲ್ಲಿರುವ ಹೆಲ್ಪ್ ಡೆಸ್ಕಿನ ವೈದ್ಯರ ತಂಡ ನಿರ್ಧರಿಸಿ, ರೋಗಿಯ ಕಾಯಿಲೆಯ ತೀವ್ರತೆಯ ಆಧಾರದ ಮೇಲೆ ಆತನಿಗೆ ತತ್ಸಮಾನ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲು ಕಳುಹಿಸಿಕೊಡಬೇಕು.
  8. ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ, ಇದನ್ನು ತಪ್ಪಿಸಲು ಪ್ರತೀ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಸಿಬ್ಬಂದಿಗಳು ಸರಿಯಾಗಿ ಮಾರ್ಗದರ್ಶನ ನೀಡಿ ತಕ್ಷಣದಲ್ಲಿ ಹತ್ತಿರವಿರುವ ಮತ್ತು ಖಾಲಿಯಿರುವ ಆಸ್ಪತ್ರೆಗಳಲ್ಲಿ ಭರ್ತಿಯಾಗಲು ಸಹಾಯ ಮಾಡಬೇಕು.
  9. ಬಹಳ ಜನರಿಂದ ಕೋವಿಡ್ ಪ್ಲಾಸ್ಮಾ ಬೇಡಿಕೆ ಬರುತ್ತಿದ್ದು, ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ಈಗಾಗಲೇ ಕೋವಿಡ್ ನಿಂದ ಗುಣಮುಖರಾಗಿರುವ ಜನರ ಪ್ಲಾಸ್ಮಾ ಸಂಗ್ರಹಿಸಲು ಅಗತ್ಯವಿರುವ ಸೌಲಭ್ಯಗಳನ್ನು ನಿರ್ಮಾಣ ಮಾಡುವಂತೆ ಸೂಚಿಸಬೇಕು ಹಾಗೂ ಹೆಚ್ಚು ಹೆಚ್ಚು ಕೋವಿಡ್ ನಿಂದ ಗುಣಮುಖರಾದ ಜನರಲ್ಲಿ ಪ್ಲಾಸ್ಮಾ ದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂಬುದಾಗಿ ಸಂಸದೆ ಪತ್ರದ ಮೂಲಕ ಮನವಿಯನ್ನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!