ಉಡುಪಿ: ನಕಲಿ ಚಿನ್ನ ಅಡವಿಟ್ಟು ಸಹಕಾರ ಸಂಘಕ್ಕೆ 20.62 ಲ.ರೂ. ವಂಚನೆ

ಉಡುಪಿ ಸೆ.9(ಉಡುಪಿ ಟೈಮ್ಸ್ ವರದಿ): ಆದರ್ಶ ಗ್ರಾಹಕರ ವಿವಿದ್ದೋದ್ದೇಶ ಸಹಕಾರ ಸಂಘದಲ್ಲಿ ನಕಲಿ ಚಿನ್ನ ಅಡವಿಟ್ಟು ಗ್ರಾಹಕನೋರ್ವ 20.62 ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಈ ಬಗ್ಗೆ ಆದರ್ಶ ಗ್ರಾಹಕರ ವಿವಿದ್ದೋದ್ದೇಶ ಸಹಕಾರ ಸಂಘದ ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಸಂಘದ ಸದಸ್ಯ ಆಪಾದಿತ ಮಹಮ್ಮದ್‌ ರಿಯಾಜ್‌ ಹಲವು ಬಾರಿ ಚಿನ್ನ ಅಡವಿರಿಸಿ ಸಾಲ ಪಡೆದಿದ್ದರು. ಆದರೆ ಸೆ.5 ರಂದು ಕಾರಿನಲ್ಲಿ ಸೊಸೈಟಿಗೆ ತನ್ನ ಹೆಂಡತಿ ಹಾಗೂ ದಾವೂದ್‌ ಅಬೂಬಕ್ಕರ್‌ ಎಂಬವರೊಂದಿಗೆ ಬಂದು 2 ನಕ್ಲೇಸ್‌ ತಂದು ಸಾಲ ಕೇಳಿದ್ದರು. ಈ ವೇಳೆ  ಅನುಮಾನಗೊಂಡ ಜಲೇಂದ್ರ ಅವರು ಸಂಘದ ಸರಾಫರಾದ ಅಶೋಕ್‌ ಆಚಾರ್ಯ ರವರಿಂದ ಚಿನ್ನ ಪರಿಶೀಲಿಸಿದಾಗ ಅದು ನಕಲಿ ಚಿನ್ನವೆಂದು ತಿಳಿದು ಬಂದಿದೆ. ಈ ವೇಳೆ ಆಪಾದಿತರು ತಾವು ಬಂದ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ನಡುವೆ ಈ ಹಿಂದೆ ಅಡವಿರಿಸಿದ ಎಲ್ಲಾ ಚಿನ್ನಗಳನ್ನು ಪರಿಶೀಲಿಸಿದಾಗ ಅವುಗಳೂ ಸಹ ನಕಲಿ ಎಂದು ತಿಳಿದು ಬಂದಿದ್ದು,  ಜು.17 ರಿಂದ ಸೆ.2 ರ ವರೆಗೆ ಹಂತ ಹಂತವಾಗಿ ಒಟ್ಟು 527.8 ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ ಒಟ್ಟು 20,62,000 ಹಣವನ್ನು ಸಾಲವಾಗಿ ಪಡೆದು ಸಂಘಕ್ಕೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!