ಕಾರ್ಕಳ: ಲೆಕ್ಕಪರಿಶೋಧಕ ನಾಪತ್ತೆ

ಕಾರ್ಕಳ ಮಾ.18 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಕಾವೇರ ಕಟ್ಟೆ ಎಂಬಲ್ಲಿಂದ ಕೆಲಸಕ್ಕೆಂದು ಹೋದ ಲೆಕ್ಕಪರಿಶೋಧಕ ಯುವಕನೋರ್ವ ವಾಪಸ್ಸು ಮನೆಗೆ ಬಾರದೆ ಮಾ.15 ರಿಂದ ನಾಪತ್ತೆಯಾಗಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳೀಯ ನಿವಾಸಿ ಅನುಷ್ (23) ನಾಪತ್ತೆಯಾಗಿರುವ ಯುವಕ. ಇವರು ಮಂಗಳೂರಿನ ಯೆಯ್ಯಾಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮಾ.15 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದರು. ಆದರೆ ಅದೇ ದಿನ ಅವರು ಕೆಲಸ ಮಾಡುವ ಸಂಸ್ಥೆಯಿಂದ ಅನುಷ್ ಅವರು ಕೆಲಸಕ್ಕೆ ಬಂದಿರುವುದಿಲ್ಲ ಎಂದು ಕರೆ ಮಾಡಿ ತಿಳಿಸಿದ್ದಾರೆ. ಈ ವೇಳೆ ಅನುಷ್ ಫೋನ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ಬಳಿಕ ದೂಪದಕಟ್ಟೆಯಲ್ಲಿ ಅವರು ಪ್ರತಿ ದಿನ ಬೈಕ್ ನಿಲ್ಲಿಸುವಲ್ಲಿ ಅವರ ಬೈಕ್ ಕಂಡು ಬಂದಿದೆ. ಅದರಂತೆ ಅನುಷ್ ಅವರು ಕೆಲಸಕ್ಕೂ ಹೋಗದೇ, ಈವರೆಗೆ ಮನೆಗೂ ಬಾರದೇ ಕಾಣೆಯಾಗಿದ್ದಾರೆ. ಅವರು ಬಿಳಿಮೈಬಣ್ಣ, ದೃಢಕಾಯಶರೀರ ಹೊಂದಿದ್ದು, ಕನ್ನಡ, ಇಂಗ್ಲೀಷ್, ತುಳು, ಹಿಂದಿಭಾಷೆ ಮಾತನಾಡುತ್ತಾರೆ. ನಾಪತ್ತೆಯಾದ ದಿನ ಅವರು ಗ್ರೇ ಕಲರ್ ಶರ್ಟ್, ಕಪ್ಪು ಜೀನ್ಸ್ ಪ್ಯಾಂಡ್ ಧರಿಸಿರುತ್ತಾರೆ ಎಂಬುದಾಗಿ ನಾಪತ್ತೆಯಾಗಿರುವವರ ತಾಯಿ ಜ್ಯೋತಿ ಶೆಟ್ಟಿ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!