ಉಡುಪಿ: ಸಂತೆಕಟ್ಟೆಯಲ್ಲಿ ಕಾಂಗ್ರೆಸ್ ನ “ಕರಾವಳಿ ಧ್ವನಿ ಯಾತ್ರೆ” ಬೃಹತ್ ಸಮಾವೇಶ
ಉಡುಪಿ ಮಾ.18(ಉಡುಪಿ ಟೈಮ್ಸ್ ವರದಿ): ಈ ಹಿಂದೆ ಕಾಂಗ್ರೆಸ್ ಅವಧಿಯ ಬೆಲೆ ಏರಿಕೆಯನ್ನು ಬಿಜೆಪಿ ಬೆನ್ನು ಮೂಳೆ ,ಸೊಂಟ ಮುರಿಯುವ ಬೆಲೆ ಏರಿಕೆ ಅಂದಿತ್ತು. ಈಗ ಅದೇ ಬೆಲೆ ಮೂರು ಪಟ್ಟು ಹೆಚ್ಚಾಗಿದೆ ಈಗ ಏನು ಮುರಿದಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಹೇಳಿದ್ದಾರೆ.
ಉಡುಪಿ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಉಡುಪಿಯ ಸಂತೆಕಟ್ಟೆಯಲ್ಲಿ ನಡೆದ ಕರಾವಳಿ ಧ್ವನಿ ಯಾತ್ರೆ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದಲ್ಲಿ ಜಿಎಸ್.ಟಿ ತೆರಿಗೆಗಳನ್ನು ಪೈಪೋಟಿಯಂತೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಎಷ್ಟೋ ದಿನಿತ್ಯದ ಆಹಾರ ವಸ್ತುಗಳ ಮೇಲೆ ತೆರಿಗೆಗಳು ಇರುತ್ತಿರಲಿಲ್ಲ. ಆದರೆ ಬಿಜೆಪಿ ಎಲ್ಲದಕ್ಕೂ ತೆರಿಗೆ ಹಾಕುತ್ತಿದೆ. ಜನರು ದಿನನಿತ್ಯ ಮನೆಯಲ್ಲಿ ತಮಗರಿವಿಲ್ಲದೆ 500 ರಿಂದ 700 ರೂ. ತೆರಿಗೆ ಕಟ್ಟುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಆಡಳಿತ ಇದ್ದಾಗ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಆಗಿನ ಬೆಲೆ ಏರಿಕೆಗೆ ಸೊಂಟ,ಬೆನ್ನು ಮುರಿಯುವ ರೀತಿ ಏರಿಕೆ ಆಗಿದೆ ಎಂದು ಟೀಕೆ ಮಾಡುತ್ತಿದ್ದರು. ಆದರೀಗ ಈಗ ಬೆಲೆ ಮೂರು ಪಟ್ಟು ಹೆಚ್ಚಾಗಿದೆ ಹಾಗಾದರೆ ಈಗ ಏನೆಲ್ಲಾ ಮುರಿದಿರಬಹುದು ಆಲೋಚನೆ ಮಾಡಿ ಎಂದು ಟೀಕಿಸಿದರು.
ಬಿಜೆಪಿಯ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಗೃಹ ಲಕ್ಷ್ಮೀ ಯೋಜನೆ ರೂಪದಲ್ಲಿ 2000 ರೂ. ಸಹಾಯಧನವನ್ನು ಕಾಂಗ್ರೆಸ್ ನೀಡಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಯೊಬ್ಬರಿಗೆ 10ಕೆ.ಜಿ ಅಕ್ಕಿ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಮೂಲಕ ತಿಂಗಳಿಗೆ ತಿಂಗಳಿಗೆ 4600, ವಾರ್ಷಿಕ 55,200 ಸೇರಿ 5 ವರ್ಷಗಳ ಅವಧಿಯಲ್ಲಿ ಒಂದು ಮನೆಗೆ 2.76 ಲಕ್ಷ ರೂ. ಸಹಾಯ ಧನವನ್ನು ಕಾಂಗ್ರೆಸ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಗೂ ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸ ಬೇಕು ಎಂದು ಕರೆ ನೀಡಿದರು.
ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಭಾವನಾತ್ಮಕ, ಕೋಮುವಾದಿ ಹೇಳಿಕೆಯಿಂದ ಕಾಂಗ್ರೆಸ್ ಸೋತಿತ್ತು. ಹಾಗೂ ಇದಕ್ಕೆ ಇಡೀ ರಾಜ್ಯವೇ ಅದರಲ್ಲೂ ಮುಖ್ಯವಾಗಿ ದ.ಕ ಮತ್ತು ಉಡುಪಿ ಕರಾವಳಿ ಭಾಗ ಬಲಿಯಾಗಿತ್ತು. ಆದರೆ ಈ ಬಾರಿ ಹಾಗೆ ಆಗಬಾರದು ಎಂದರು ಹಾಗೂ ಅವರು ಇನ್ನೊಬ್ಬರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಯೇ ವಿನಃ ಅಭಿವೃದ್ಧಿ ಯನ್ನು ಹೇಳುತ್ತಿಲ್ಲ. ಅವರ ನಾಯಕರು ಅಭಿವೃದ್ಧಿ ಬಗ್ಗೆ ಮಾತಾನಾಡಬೇಡಿ ಬದಲಾಗಿ ಲವ್ ಜಿಹಾದ್, ಹಿಜಾಬ್ ಬಗ್ಗೆ ಮಾತನಾಡಿ ಎನ್ನುತ್ತಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಬಿ.ಎಲ್ ಶಂಕರ್,ಉಡುಪಿ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಸಿಗಳಾದ ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಪ್ರಸಾದ್ ಕಾಂಚನ್, ದಿವಾಕರ್ ಕುಂದರ್, ಪ್ರಖ್ಯಾತ್ ಶೆಟ್ಟಿ, ಮುಖಂಡರಾದ ಎಂ.ಎ ಗಫೂರ್, ರಾಜು ಪೂಜಾರಿ, ದಿನಕರ್ ಹೇರೂರು, ಸರಳ ಕಾಂಚನ್, ಅಣ್ಣಯ್ಯ ಸೇರಿಗಾರ್, ವೆರೋನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು.