ಮಟ್ಕಾ ಜುಗಾರಿ ಅಡ್ಡೆಗೆ ದಾಳಿ ನಗದು ವಶಕ್ಕೆ

ಉಡುಪಿ ಮಾ.16(ಉಡುಪಿ ಟೈಮ್ಸ್ ವರದಿ): ವಿವಿಧ ಕಡೆ ನಡೆದ ಪ್ರತ್ಯೇಕ ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಜಿಲ್ಲೆಯ ಕಾರ್ಕಳ, ಮಲ್ಪೆ, ಬ್ರಹ್ಮಾವರ ಠಾಣಾ ಪೊಲೀಸರು ಸೂಚಿತ ಸ್ಥಳಕ್ಕೆ ದಾಳಿ ಮಾಡಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಬೋಳ ಗ್ರಾಮದ ಮೇಲಂಗಡಿ ಸಾರ್ವಜನಿಕ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ನಿಟ್ಟೆ ಗ್ರಾಮದ ನಿವಾಸಿ ಪ್ರವೀಣ್ (27) ಎಂಬಾತನನ್ನು ಹಾಗೂ ಮಲ್ಪೆ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಮಲ್ಪೆ ಬಂದರಿನ ಬಾಪುತೋಟ ಬೋಟ್ ಕಚ್ಚೆರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪೆರ್ಡೂರು ಗ್ರಾಮದ ಸಂತೋಷ್ ಪೂಜಾರಿ (49) ಎಂಬಾತನನ್ನು ಮತ್ತು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸು ನಿಲ್ದಾಣದ ಸಾರ್ವಜನಿಕರ ಶೌಚಾಯಲಯದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೆಳಾರ್ಕಳ ಬೆಟ್ಟು ಗ್ರಾಮದ ಸಂದೇಶ ಪೂಜಾರಿ (24) ಎಂಬಾತನನ್ನು ಸೇರಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪೈಕಿ ಕಾರ್ಕಳದ ಆರೋಪಿಯಿಂದ 1,840 ನಗದು, ಮಲ್ಪೆಯ ಆರೋಪಿಯಿಂದ 1,650 ರೂ. ನಗದು, ಬ್ರಹ್ಮಾವರದ ಆರೋಪಿಯಿಂದ 930 ರೂ ನಗದು ಸಹಿತಿ ಮೂರೂ ಆರೋಪಿಗಳಿಂದ ಆಟಕ್ಕೆ ಬಳಸಿದ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ, ಮಲ್ಪೆ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಲಾ 1 ರಂತೆ 3 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!