ಮಣಿಪಾಲ: ರೈಲು ಹತ್ತುವ ವೇಳೆ 4 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಕಳ್ಳರು

ಮಣಿಪಾಲ ಮಾ.15 (ಉಡುಪಿ ಟೈಮ್ಸ್ ವರದಿ) : ರೈಲು ಹತ್ತುತ್ತಿದ್ದ ವೇಳೆ ಪ್ರಯಾಣಿಕರೊಬ್ಬರ ಬ್ಯಾಗ್ ನಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಮಣಿಪಾಲದ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಕಾಪುವಿನ ಕುತ್ಯಾರ ಗ್ರಾಮದ ಪುನೀತ ವಸಂತ್ ಹೆಗ್ಡೆ ಅವರು ನಿನ್ನೆ ಕುಟುಂಬದ ಸದಸ್ಯರೊಂದಿಗೆ ಮುಂಬಿಯಿಗೆ ಹೋಗಲು ಮಂಗಳೂರು – ಮುಂಬಯಿ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದ್ರಾಳಿ ರೈಲ್ವೇ ನಿಲ್ದಾಣದಿಂದ ಹೊರಟಿದ್ದರು. ಪುನೀತ ಅವರು ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಬಂಗಾರದ ಒಡವೆಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆಗಳ ಮಧ್ಯೆ ಇಟ್ಟಿದ್ದರು. ಬ್ಯಾಗನ್ನು ಹೆಗಲಿನಲ್ಲಿ ಹಾಕಿಕೊಂಡಿದ್ದು, ರೈಲು ಸೀಟ್ ನಲ್ಲಿ ಕುಳಿತಾಗ ವ್ಯಾನಿಟಿ ಬ್ಯಾಗ್ ಝಿಫ್ ತೆರೆದಿರುವುದು ಕಂಡು ಬಂದಿದ್ದು, ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ ನ ಓಳಗೆ ಇಟ್ಟಿದ್ದ ಬಂಗಾರದ ಒಡೆವೆಗಳ ಕವರ್ ಇಲ್ಲದಿರುವುದು ಕಂಡು ಬಂದಿದೆ. ಅದರಂತೆ ಪುನೀತ ಅವರು ನಿನ್ನೆ ಮಧ್ಯಾಹ್ನ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯ ಯಾರೋ ಕಳ್ಳರು ವ್ಯಾನಿಟಿ ಬ್ಯಾಗ್ ಝಿಫ್ ನ್ನು ತೆರೆದು ಬ್ಯಾಗ್ ನಲ್ಲಿದ್ದ ಅಂದಾಜು ಮೌಲ್ಯ 4,00,000 ರೂ. ಮೌಲ್ಯದ ಸುಮಾರು 100 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ 3000 ರೂ. ಮೌಲ್ಯದ ವಾಚ್ ನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪುನೀತ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!