ಮೈಸೂರು: ಆಸ್ತಿ ತಕರಾರು ಜೋಡಿ ಕೊಲೆಯಲ್ಲಿ ಅಂತ್ಯ

ಮೈಸೂರು: ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಇಬ್ಬರು ವ್ಯಕ್ತಿಗಳನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ಎಲೆತೋಟದ ಸಮೀಪ ನಡೆದಿದೆ. ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಕೊಲೆಗೀಡಾದವರು. ಇವರ ಜತೆ ಇದ್ದ ಮಧು ಎಂಬುವವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಮುಂಡಿಬೆಟ್ಟದ ಬುಡದಲ್ಲಿ ಇದ್ದ ಜಾಗದ ಕುರಿತು ಕಿರಣ್, ಸ್ವಾಮಿ ಮತ್ತು ಶಿವು ಎಂಬವರಿಗೆ ಮೊದಲಿನಿಂದಲೂ ವೈಮನಸ್ಸು ಇತ್ತು. ಇದೇ ವಿಚಾರವಾಗಿ ಮಾತನಾಡಲು ಎಂದು ಎರಡು ಗುಂಪುಗಳು ಚಾಮುಂಡಿಪುರಂ ವೃತ್ತದಿಂದ ಊಟಿ ರಸ್ತೆಗೆ ಹೋಗುವ ಮಾರ್ಗ ಮಧ್ಯೆ ಇರುವ ಎಲೆತೋಟದ ಸಮೀಪ ಸೇರಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ.

ಇದೇ ವಿಚಾರವಾಗಿ ತಡರಾತ್ರಿ ಸ್ವಾಮಿ, ಶಿವು ಹಾಗೂ ಇತರ ಇಬ್ಬರ ತಂಡ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ರಾತ್ರಿ ಡಿಸಿಪಿ ಡಾ.ಎ.ಎನ್. ಪ್ರಕಾಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೃತ್ಯ ನಡೆಸಿರುವ ಆರೋಪಿಗಳ ಪತ್ತೆಗೆ ಪೊಲೀಸರ ತಂಡ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!