ಸುರತ್ಕಲ್: ಕಾರು ಮರಕ್ಕೆ ಡಿಕ್ಕಿ ಮಹಿಳೆ ಸಾವು
ಸುರತ್ಕಲ್(ಉಡುಪಿ ಟೈಮ್ಸ್ ವರದಿ): ಕಾರೊಂದು ಮರಕ್ಕೆ ಢಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಕುಳಾಯಿ ಬಳಿಯ ಗೋಕುಲನಗರ ಕ್ರಾಸ್ ನಲ್ಲಿ ಫೆ.3 ರ ತಡರಾತ್ರಿ ನಡೆದಿದೆ.ಮೃತಪಟ್ಟ ಮಹಿಳೆಯನ್ನು ಬೋಂದೆಲ್ನ ಸುಹಾನಾ (26) ಎಂದು ಗುರುತಿಸಲಾಗಿದೆ.
ಅಪಘಾತದ ವೇಳೆ ಕಾರಿನಲ್ಲಿದ್ದ ಸುಹಾನಾರ ಸಹೋದರಿ ಫಾತಿಮಾ ಶೌರೀನ್, ಸಹೋದರರಾದ ರಾಹಿಲ್ ಶಮೀಮ್ ಮತ್ತು ರಾಝಿಕ್ ಶಹಾನ್ ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕಾರಿನಲ್ಲಿ ಮಂಗಳೂರಿನಿಂದ ಚೊಕ್ಕಬೆಟ್ಟು ಕಡೆ ಹೋಗುತ್ತಿದ್ದಾಗ ರಾಹಿಲ್ ಶಮೀಮ್ಗೆ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ಕಾರು ಬಂದಂತಾಗಿ ಅದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.