ಮುಲ್ಕಿ: ಅಪಘಾತ ಪ್ರಕರಣ-ಆರೋಪಿ ತುಳು ಸ್ಟ್ಯಾಂಡ್ ಆಫ್ ಕಾಮಿಡಿಯನ್ ಅರ್ಪಿತ್ ಬಂಧನ
ಮುಲ್ಕಿ, ಫೆ.4: ಜ.31 ರ ಮಧ್ಯರಾತ್ರಿ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾರು ಚಾಲಕ ತುಳು ಸ್ಟ್ಯಾಂಡ್ ಆಫ್ ಕಾಮಿಡಿಯನ್ ಅರ್ಪಿತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಾರು ಚಾಲಕ ಹಳೆಯಂಗಡಿ ಇಂದ್ರ ನಗರ ನಿವಾಸಿ ತುಳು ಸ್ಟ್ಯಾಂಡ್ ಆಫ್ ಕಾಮಿಡಿ ಯೂಟ್ಯೂಬರ್ ಅರ್ಪಿತ್ ಬಂಧಿತ ಆರೋಪಿ. ಮಧ್ಯಪ್ರದೇಶದ ಇಂದೋರ್ನಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ ಪಡುಪಣಂಬೂರು ಬಳಿ ಟಯರ್ ಪಂಚರ್ ಆಗಿದ್ದು ಲಾರಿಯಲ್ಲಿದ್ದ ಮಧ್ಯಪ್ರದೇಶ ನಿವಾಸಿಗಳಾದ ಬಬುಲು(23), ಆಚಲ್ ಸಿಂಗ್ (30) ಹಾಗೂ ಕೇರಳ ನಿವಾಸಿ ಅನೀಶ್(42) ಎಂಬವರು ಕೆಳಗಿಳಿದು ಹೆದ್ದಾರಿ ಬದಿಯಲ್ಲಿ ಟಯರ್ ತೆಗೆದು ದುರಸ್ತಿ ಮಾಡುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಚಲಿಸಿದ ಕಾರು ಲಾರಿಯ ಟಯರ್ ದುರಸ್ತಿ ಮಾಡುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಓರ್ವ ಗಂಭೀರ ಗಾಯಗೊಂಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ತನಿಖೆ ನಡೆಸಿ ಆರೋಪಿ ಅರ್ಪಿತ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.