ಸಾಲಿಗ್ರಾಮ: ಮದ್ಯ ಸೇವನೆ ನೆಪದಲ್ಲಿ ಬಾರ್ ಮಾಲೀಕರಿಬ್ಬರ ಹತ್ಯೆಗೆ ಯತ್ನ

ಸಾಲಿಗ್ರಾಮ ಫೆ.2 (ಉಡುಪಿ ಟೈಮ್ಸ್ ವರದಿ) : ಮದ್ಯ ಸೇವನೆ ಮಾಡುವ ನೆಪದಲ್ಲಿ ಬಂದಿದ್ದ ಐದು ಮಂದಿ ದುಷ್ಕರ್ಮಿಗಳು ಅನಾವಶ್ಯಕವಾಗಿ ಗಲಾಟೆ ಎಬ್ಬಿಸಿ ಬಾರ್ ಮಾಲೀಕರನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಸಾಲಿಗ್ರಾಮದ ಚಿತ್ರಪಾಡಿ ಗ್ರಾಮದ ಬಾರ್ ವೊಂದರಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸ್ಥಳೀಯರಾದ ರೋಹಿತ್, ರಂಜಿತ್, ಸುಚಿನ್, ಶಶಾಂಕ್ ಹಾಗೂ ವಿಘ್ನೇಶ್ ಪ್ರಕರಣದ ಆರೋಪಿಗಳು,

ಈ ಹಿಂದೆ ಬಾರ್ ನಲ್ಲಿ ಗಲಾಟೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನರ್ತಕಿ ಬಾರ್‍ನ ಮಾಲೀಕ ರಿತೇಶ್ ಮತ್ತು ಅವರ ತಮ್ಮ ರಾಹುಲ್ ಶೆಟ್ಟಿ ಎಚ್ಚರಿಕೆ ನೀಡಿದ್ದರು. ಇದೇ ದ್ವೇಷವನ್ನು ಇಟ್ಟುಕೊಂಡು ಬಾರ್ ಮಾಲೀಕರನ್ನು ಕೊಲೆ ಮಾಡುವ ಉದ್ದೇಶದಿಂದ ನಿನ್ನೆ ರಾತ್ರಿ ಮತ್ತೆ ಈ ಐವರು ಬಾರ್ ಗೆ ಬಂದಿದ್ದರು. ಬಾರ್ ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಇವರು ಸ್ವಲ್ಪ ಸಮಯದ ಬಳಿಕ ಅನಾವಶ್ಯಕವಾಗಿ ಗಲಾಟೆ ಎಬ್ಬಿಸಿದ್ದಾರೆ. ಈ ವೇಳೆ ಬಾರಿನ ಮಾಲೀಕರಾದ ರಿತೇಶ್ ಮತ್ತು ರಾಹುಲ್ ಅವರು ಬಂದು ಏನು ಗಲಾಟೆ ಎಂದು ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟಲಿಯಿಂದ ಹಾಗೂ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಕಾಲಿನಿಂದ ತುಳಿದ್ದಾರೆ ಎನ್ನಲಾಗಿದೆ. ಆರೋಪಿಗಳ ಹಲ್ಲೆಯಿಂದ ರಾಹುಲ್ ಹಾಗೂ ರಿತೇಶ್ ಅವರು ಗಾಯಗೊಂಡಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!