ಮಂಗಳೂರು: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ, 27 ಲಕ್ಷ ರೂ. ಮೌಲ್ಯದ ಗಾಂಜಾ ವಶ
ಮಂಗಳೂರು, ಫೆ.1 : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ನೆತ್ತಿಲಪದವು ಎಂಬಲ್ಲಿ ನಡೆದಿದೆ.
ಮಂಜೇಶ್ವರದ ಹೊಸಬೆಟ್ಟು ಕಡಪುರಂ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಹ್ಯಾರೀಸ್ (35), ಕುಂಬ್ಳೆ ಮಂಬ್ರಾನ್ ಗ್ರಾಮದ ಆರಿಕ್ಕಾಡಿ ಬೀರಂಟಿಕಾರ ನಿವಾಸಿ ಅಖಿಲ್ ಎಂ. (25), ಹಾಗೂ ಹೈದರ್ ಆಲಿ ಅಲಿಯಾಸ್ ಗಾಡಿ ಹೈದರ್ (39) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಗಾಂಜಾ, ಗಾಂಜಾ ಸಾಗಾಟಕ್ಕೆ ಬಳಸಿದ ಕಾರು ಸೇರಿದಂತೆ ಒಟ್ಟು 32,07,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್ ಮತ್ತು ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಸಹಾಯಕ ಪೊಲೀಸ್ ಆಯುಕ್ತ ಧನ್ಯ ನಾಯಕ್ ಅವರ ಮಾರ್ಗದರ್ಶನದಂತೆ ಕೊಣಾಜೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ನೇತೃತ್ವದಲ್ಲಿ ಪಿಎಸ್ಐ ಶರಣಪ್ಪ ಭಂಡಾರಿ, ಸಿಬಂದಿಗಳಾದ ಶೈಲೇಂದ್ರ, ನವೀನ್, ವಿನ್ಸೆಂಟ್ ರೋಡ್ರಿಗಸ್, ಸುರೇಶ್, ಬರಮ ಬಡಿಗೇರ, ಹೇಮಂತ್, ಪುರುಷೋತ್ತಮ, ದೇವರಾಜ್, ಶಿವಕುಮಾರ್, ದೀಪಕ್, ಸುನೀತಾ, ಮಹಮ್ಮದ್ ಗೌಸ್ ಹಾಗೂ ತಾಂತ್ರಿಕ ವಿಭಾಗದ ಮನೋಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.