ಬೆಂಗಳೂರಿನಲ್ಲಿ ಕೊಲೆಯಾದ ಯುವಕನ ಮೃತದೇಹ ಚಾರ್ಮಾಡಿ ಘಾಟ್ ನಲ್ಲಿ ಪತ್ತೆ

ಚಿಕ್ಕಮಗಳೂರು, ಫೆ.1 : ಬೆಂಗಳೂರಿನಲ್ಲಿ ಕೊಲೆಯಾದ ಯುವಕನ ಮೃತದೇಹ ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಪತ್ತೆಯಾಗಿದೆ.

ಬೆಂಗಳೂರಿನ ಆಂಧ್ರಹಳ್ಳಿ ನಿವಾಸಿ ಗೋವಿಂದರಾಜು (19) ಕೊಲೆಯಾದ ಯುವಕ.

ಯುವತಿಯೊಬ್ಬಳಿಗೆ ಮೆಸೇಜ್ ಮಾಡಿದನೆಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದ ಪ್ರಕರಣವನ್ನು ಭೇದಿಸಿರುವ ಯಶವಂತಪುರ ಠಾಣೆ ಪೊಲೀಸರು ಚಾರ್ಮಾಡಿ ಘಾಟ್ ನ ಪ್ರಪಾತದಲ್ಲಿ ಮೃತ ಗೋವಿಂದರಾಜು ನ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಯುವತಿಗೆ ಮೆಸೇಜ್ ಮಾಡಿದ್ದಕ್ಕಾಗಿ ತನ್ನ ಮಗ ಗೋವಿಂದರಾಜುವನ್ನು ಯುವತಿಯ ಸೋದರ ಮಾವ ಅನಿಲ್ ಕುಮಾರ್ ಎಂಬಾತ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಗೋವಿಂದರಾಜು ತಂದೆ ರಘು ಅವರು ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನಿಲ್ ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಅನಿಲ್ ಕುಮಾರ್, ಭರತ್ ಸೇರಿದಂತೆ ಬಂಧಿತ ನಾಲ್ವರು ಆರೋಪಿಗಳನ್ನು ಯಶವಂತಪುರ ಪೊಲೀಸರು ಇಂದು ಚಾರ್ಮಾಡಿ ಘಾಟ್ ಗೆ ಕರೆತಂದು ಸ್ಥಳೀಯ ಸಮಾಜ ಸೇವಕರೊಂದಿಗೆ ಶೋಧ ನಡೆಸಿದ್ದಾರೆ. ಈ ವೇಳೆ ಪ್ರಪಾತದಲ್ಲಿ ಗೋವಿಂದರಾಜು ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಗೋವಿಂದರಾಜು ತನ್ನದೇ ಕುಟುಂಬದ ಮತ್ತಿಕೆರೆಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಪ್ರೀತಿಗೆ ಯುವತಿಯ ಪೋಷಕರು, ಸಂಬಂಧಿಕರಿಂದ ವಿರೋಧವಿತ್ತೆನ್ನಲಾಗಿದೆ. ಇತ್ತೀಚೆಗೆ ಗೋವಿಂದರಾಜು ಯುವತಿಯ ಮೊಬೈಲ್ ಫೋನ್ ಗೆ ಮೆಸೇಜೊಂದನನ್ನು ಕಳುಹಿಸಿದ್ದು, ಇದನ್ನು ಗಮನಿಸಿದ ಯುವತಿಯ ಸಂಬಂಧಿಕ ಅನಿಲ್ ಕುಮಾರ್, ಭರತ್ ಎಂಬವರು ಇನ್ನಿಬ್ಬರೊಂದಿಗೆ ಸೇರಿ ಗೋವಿಂದರಾಜುನನ್ನು ಮತ್ತಿಕೆರೆಯಲ್ಲಿ ಕಾರಿನಲ್ಲಿ ಅಪಹರಿಸಿದ್ದಾರೆ. ನಂತರ ಬೆಂಗಳೂರಿನ ರಾಜ್ ಗೋಪಾಲ್ ನಗರದ ಅಂಧರಹಳ್ಳಿ ಎಂಬಲ್ಲಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಚಾರ್ಮಾಡಿ ಘಾಟ್ ಗೆ ತಂದು ಪ್ರಪಾತಕ್ಕೆ ಎಸೆದಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!