ಗೋವಾ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ನೇತ್ರತಪಾಸಣಾ ಅಭಿಯಾನ ಉದ್ಘಾಟನೆ
ಗೋವಾ ಜ.30: ಸರಕಾರದ ಯೋಜನೆ, ಅಂಕಿ-ಅಂಶ ಮತ್ತು ಮೌಲ್ಯಮಾಪನಾ ನಿರ್ದೇಶನಾಲಯ, ಗೋವಾ ಸಿಎಸ್ಆರ್ ಪ್ರಾಧಿಕಾರ, ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾರಾಜ್ಯಾದ್ಯಂತ ಇರುವ ಪ್ರಾಧಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ದೃಷ್ಟಿ ತಪಾಸಣಾ ಅಭಿಯಾನ ನಡೆಸಲಾಯಿತು.
ಸರಕಾರದ ವಿಷನ್ ಫಾರ್ ಆಲ್ ಯೋಜನೆಯಡಿಯಲ್ಲಿ ಕೈಗೊಂಡ ಈ ದೃಷ್ಟಿ ತಪಾಸಣಾ ಅಭಿಯಾನವನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ವೇಳೆ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ರವರು ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರನ್ನು ಗೌರವಿಸಿದರು.
ಈ ಸಂರ್ಭದಲ್ಲಿ ಒನ್ ಸೈಟ್ ಎಸ್ಸಿಲಾರ್ ನ ನಿರ್ದೇಶಕ ಮಹೇಶ್ ಕೆ.ವಿ., ಡಾ. ರಾಹುಲ್ ಆಲಿ, ಧರ್ಮ ಪ್ರಸಾದ್ ರೈ, ಯೋಜನಾ ನಿರ್ದೇಶನಾಲಯದ ಉಪ ನಿರ್ದೇಶಕ ವಿಜಯ್ ಬಿ. ಸಕ್ಸೇನಾ ಉಪಸ್ಥಿತರಿದ್ದರು.
ಈ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಸುಮಾರು 2 ಲಕ್ಷ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆಯಾಗಲಿದ್ದು, ಮೊದಲ ಹಂತದಲ್ಲಿ ವಿದ್ಯಾರ್ಥಿಗಳ ಪ್ರಾಥಮಿಕ ಕಣ್ಣಿನ ಪರೀಕ್ಷೆಯನ್ನು ಅಯಾಯಾ ಶಾಲೆಗಳಲ್ಲಿ ನಡೆಸುವ ಬಗ್ಗೆ ಸುಮಾರು 1500 ಶಿಕ್ಷಕರಿಗೆ ಪ್ರಸಾದ್ ನೇತ್ರಾಲಯದ ವತಿಯಿಂದ ತರಬೇತಿ ನೀಡಲಾಯಿತು.
ಬೆಂಗಳೂರಿನ ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ ಹಾಗೂ ಗೋವಾದ ಜಿಕೆಬಿ ವಿಷನ್ ಪ್ರೈ.ಲಿ ಸಂಸ್ಥೆ ಈ ಯೋಜನೆಗೆ ತಾಂತ್ರಿಕ ಸಹಕಾರ ನೀಡಲಿದೆ. ಹಾಗೂ ಕನ್ನಡಕದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಚಿಕಿತ್ಸೆಯನ್ನು ಈ ಯೋಜನೆಯಡಿಯಲ್ಲಿ ನೀಡಲಾಗುವುದು ಎಂದು ತಿಳಿದು ಬಂದಿದೆ.