ಮಣಿಪಾಲ: ಕೆಎಂಸಿಯಲ್ಲಿ ಆನ್ಲೈನ್ ಕಾರ್ಯಾಗಾರ
ಮಣಿಪಾಲ, ಜ.30 (ಉಡುಪಿ ಟೈಮ್ಸ್ ವರದಿ) : ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಅಂಗ ಸಂಸ್ಥೆಯಾಗಿರುವ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ಜ.28 ಮತ್ತು 29 ರಂದು ಆನ್ಲೈನ್ ಮೂಲಕ ಎಂಡೋಸ್ಕೋಪಿ ಮತ್ತು ಬಂಜೆತನ ಅಲ್ಟ್ರಾಸೌಂಡ್ ಕುರಿತು ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡಾ. ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಈ ಎರಡು ದಿನಗಳ ಕಾರ್ಯಾಗಾರವನ್ನು ಮಣಿಪಾಲದ ಮಾಹೆಯ ಬೋಧಕ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಅವರು ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಾಗಾರದಲ್ಲಿ ವಿಭಾಗದ ತಜ್ಞರೊಂದಿಗೆ ರಾಷ್ಟ್ರೀಯ ಮಟ್ಟದ ವಿವಿಧ ತಜ್ಞರು ಬಂಜೆತನ ನಿವಾರಣೆಗೆ ಲಭ್ಯವಿರುವ ಶಸ್ತ್ರಚಿಕಿತ್ಸೆಗಳು ಮತ್ತು ಅಲ್ಟ್ರಾಸೌಂಡ್ನ ವಿವಿಧ ತಂತ್ರಗಳನ್ನು ಪ್ರದರ್ಶಿಸಿದರು. ಈ ಎಲ್ಲಾ ತಂತ್ರಗಳು ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ಹಾಗೂ ಬಂಜೆತನಕ್ಕೆ ಮುಖ್ಯ ಕಾರಣವಾಗಿರುವ ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್ ರೋಗಿಗಳ ಕುರಿತು, ಪ್ರದರ್ಶನ ಮತ್ತು ಚರ್ಚೆ ನಡೆಯಿತು. ಇದರ ಜೊತೆಗೆ ಹೊಸ ಗ್ಯಾಜೆಟ್ಗಳು ಮತ್ತು ಅಲ್ಟ್ರಾಸೌಂಡ್ನ ತಂತ್ರಗಳೊಂದಿಗೆ ಅಂಡೋತ್ಪತ್ತಿಯ ಸರಿಯಾದ ದಿನವನ್ನು ಕಂಡುಹಿಡಿಯುವುದರ ಕುರಿತು ನೇರ ಪ್ರದರ್ಶನದೊಂದಿಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಣಿಪಾಲ ಸಹಾಯಕ ಸಂತಾನೋತ್ಪತ್ತಿ ಕೇಂದ್ರ (MARC) ಹಾಗೂ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರತಾಪ್ ಕುಮಾರ್ ಅವರ ನೇತೃತ್ವದಲ್ಲಿ ಡಾ ಪದ್ಮರಾಜ್ ಹೆಗ್ಡೆ, ಡೀನ್ ಕೆಎಂಸಿ ಮಣಿಪಾಲ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿಯವರ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಮಾರು 100 ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.