ಜಾತ್ರೆಗೆ ಹೊರಟಿದ್ದ ವಾಹನ ಮರಕ್ಕೆ ಡಿಕ್ಕಿ: 6 ಮಂದಿ ಮೃತ್ಯು

ಬೆಳಗಾವಿ ಜ.5 : ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಬಳಿಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದು 6 ಮಂದಿ ಮೃತಪಟ್ಟು ಹಲವರು ಗಾಯಗೊಂಡ ಘಟನೆ ಇಂದು ನಸುಕಿನ ವೇಳೆ ನಡೆದಿದೆ.

ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ನಿವಾಸಿಗಳಾದ ಹಣಮವ್ವ ಮಾರುತಿ (42), ದೀಪಾ (31), ಮೇಗಾಡಿ (25), ಇಂದ್ರವ್ವ (24), ಸವಿತಾ (17), ಸುಪ್ರಿತಾ (11) ಮೃತಪಟ್ಟವರು. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಗೋಕಾಕ ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಗೂಡ್ಸ್ ವಾಹನದಲ್ಲಿ ಸುಮಾರು 23 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಇವರು ಸವದತ್ತಿ ದೇವಸ್ಥಾನದ ಜಾತ್ರೆಗೆ ಹೊರಟಿದ್ದರು. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಚುಂಚನೂರು ಎಂಬಲ್ಲಿ ಬೃಹತ್ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ರಾಮದುರ್ಗ ತಾಲೂಕಿನ ಕಡಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!