ಡಿ.7: ಉದ್ಯಾವರದಲ್ಲಿ ರಂಗ ತರಂಗ ಕಲಾವಿದರು ಕಾಪು ಇವರ ‘ಬುಡೆದಿ’ ನಾಟಕ ಪ್ರದರ್ಶನ
ಉದ್ಯಾವರ ಡಿ.3 (ಉಡುಪಿ ಟೈಮ್ಸ್ ವರದಿ) : ಡಿಸೆಂಬರ್ 6 ಮತ್ತು 7 ರಂದು ನಡೆಯುವ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವಾರ್ಷಿಕ ಮಹೋತ್ಸದಲ್ಲಿ ಕಾಪುವಿನ ರಂಗ ತರಂಗ ಕಲಾವಿದರಿಂದ “ಬುಡೆದಿ” ಎಂಬ ತುಳು ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ.
ವಾರ್ಷಿಕ ಮಹೋತ್ಸವದ ಸಂಭ್ರಮದ ಪ್ರಯುಕ್ತವಾಗಿ ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವಠಾರದಲ್ಲಿ ಡಿ.7 ರಂದು ಸಂಜೆ 6:30ಕ್ಕೆ ನಡೆಯುವ ರಂಗ ತರಂಗ ಕಾಪು ಇಲ್ಲಿಯ ಕಲಾವಿದರಿಂದ “ಬುಡೆದಿ” ತುಳು ನಾಟಕವು ಅವಿಭಾಜಿತ ಜಿಲ್ಲೆಯಲ್ಲಿಯೇ ಪ್ರಪ್ರಥಮ ಪ್ರದರ್ಶನವಾಗಲಿದೆ. ವಾರ್ಷಿಕ ವಿವಿಧ ಚಟುವಟಿಕೆಗಳ ಸಹಾಯಾರ್ಥವಾಗಿ ನಡೆಯುವ ಈ ನಾಟಕಕ್ಕೆ ಟಿಕೇಟು ದರ ನಿಗದಿಪಡಿಸಲಾಗಿದ್ದು, ನಾಟಕದ ಬಳಿಕ ಉದ್ಯಾವರ- ಬೋಳಾರ್ಗುಡ್ಡೆ – ಪಿತ್ರೋಡಿ ಸಂಪಿಗೆನಗರ- ಬೋಳ್ಜೆ -ಕೆಮ್ತೂರು ಪರಿಸರದವರಿಗೆ ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಐಸಿವೈಎಂ ಯುವ ಸಂಘಟನೆ ತನ್ನ ವಾರ್ಷಿಕ ವಿವಿಧ ಚಟುವಟಿಕೆಗಳ ಸಹಾಯಾರ್ಥವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ತುಳು ನಾಟಕವನ್ನು ಹಮ್ಮಿಕೊಂಡಿದೆ. ತುಳು ನಾಡಿನ ಪ್ರಖ್ಯಾತ ಹಾಸ್ಯ ಕಾರ್ಯಕ್ರಮ ಬಲೆ ತೆಲಿಪಲೆಯಲ್ಲಿ ಹಲೋ ಪ್ರಶಸ್ತಿಗಳನ್ನು ಬಾಚಿಕೊಂಡು ತನ್ನ ವಿಶಿಷ್ಟ ಹಾಸ್ಯದೊಂದಿಗೆ ಜನರ ಮನಸ್ಸನ್ನು ಗೆದ್ದಿರುವ ರಂಗ ತರಂಗ ಕಾಪು ಇಲ್ಲಿಯ ಕಲಾವಿದರಿಂದ ಈ ನಾಟಕ ಪ್ರದರ್ಶನ ನಡೆಯಲಿದೆ. ಖ್ಯಾತ ಹಾಸ್ಯ ನಟ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಮರ್ವಿನ್ ಶಿರ್ವ ಸಹಿತ ಹಲವು ಪ್ರಬುದ್ಧ ಕಲಾವಿದರು ನಟಿಸುವಂತಹ ಈ ನಾಟಕವನ್ನು ಖ್ಯಾತ ರಂಗ ನಿರ್ದೇಶಕ ವಿದ್ದು ಉಚಿಲ್ ನಿರ್ದೇಶನ ನೀಡಿದ್ದಾರೆ. ಸಮಾಜ ರತ್ನ ಲೀಲಾಧರ ಶೆಟ್ಟಿ ಸಾರಥ್ಯದ ಈ ನಾಟಕಕ್ಕೆ ಶರತ್ ಉಚ್ಚಿಲ ಸಂಗೀತವನ್ನು ನೀಡಿದ್ದಾರೆ.