ಬಿಜೆಪಿ ಕಚೇರಿ ರೌಡಿಗಳ ಅಡ್ಡೆ: ಬೊಮ್ಮಾಯಿ ರೌಡಿಗಳಿಗೆ ಮಹಾಗುರು- ಕಾಂಗ್ರೆಸ್ ಟ್ವೀಟ್

ಬೆಂಗಳೂರು ಡಿ.3 : ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ, ಬೊಮ್ಮಾಯಿಯವರು ರೌಡಿಗಳಿಗೆ ಮಹಾಗುರುವಿನಂತೆ ಎಂದು ಬಿಜೆಪಿ ನಾಯಕರು ರೌಡಿ ಶೀಟರ್‍ಗಳೊಂದಿಗೆ ಕಾಣಿಸಿಕೊಂಡಿರುವುದರ ವಿರುದ್ಧ ಟ್ವೀಟ್ ಮೂಲಕ ಕಾಂಗ್ರೆಸ್ ಟೀಕಿಸಿದೆ.

ಸೈಲೆಂಟ್ ಸುನಿಲ್, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಬಿಜೆಪಿ ಸೇರ್ಪಡೆ ವಿಚಾರವಾಗಿ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಗುಡುಗಿರುವ ಕಾಂಗ್ರೆಸ್, ‘ರೌಡಿಗಳನ್ನು ಬಿಜೆಪಿ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಮತ್ತೊಂದೆಡೆ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನವನ್ನೇ ನಡೆಸುತ್ತಿದೆ. ಸಂಸದ ಪ್ರತಾಪ ಸಿಂಹ ಅವರು ಬೆತ್ತನಗೆರೆ ಶಂಕರ ಎಂಬ ರೌಡಿ ಶೀಟರ್‍ನನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿ’ ಎಂದು ಟೀಕಿಸಿದೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರೌಡಿರಾಜ್ಯ ಕಟ್ಟಲು ಹೊರಟಿದ್ದೀರಾ? ಇದೇನಾ ನಿಮ್ಮ ಸಂಸ್ಕೃತಿ’ ಎಂದು ವ್ಯಂಗ್ಯವಾಡಿದೆ.

ಹಾಗೂ ‘ಸಿಎಂ ಬೊಮ್ಮಾಯಿಯವರು ದಮ್ಮು, ತಾಕತ್ತು ಇದ್ರೆ ಬನ್ನಿ ಎಂದು ರೌಡಿಸಂ ಭಾಷೆಯಲ್ಲಿ ಸವಾಲು ಹಾಕಿದ್ದರ ಹಿಂದೆ ನೈಜ ರೌಡಿಸಂ ಇದೆ ಎಂದು ಈಗ ಬೆಳಕಿಗೆ ಬರುತ್ತಿದೆ. ಬೊಮ್ಮಾಯಿ ಅವರೇ, ರೌಡಿ ಮೋರ್ಚಾ ಕಟ್ಟಿಕೊಂಡು ಈ ಸವಾಲು ಹಾಕಿದೀರಾ? ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ, ಬೊಮ್ಮಾಯಿಯವರು ರೌಡಿಗಳಿಗೆ ಮಹಾಗುರುವಿನಂತೆ ಆಗಿದ್ದಾರೆ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಹಿಂದೆ ರೌಡಿಗಳನ್ನು ಕಂಡರೆ ಪೊಲೀಸರು ಒದ್ದು ಎಳೆದು ತರುತ್ತಿದ್ದರು, ಈಗ ಬಿಜೆಪಿಯ ರೌಡಿ ರಾಜಕೀಯದಿಂದಾಗಿ ಅದೇ ರೌಡಿಗಳಿಗೆ ಪೊಲೀಸರು ಸೆಲ್ಯೂಟ್ ಹೊಡೆಯುವಂತಾಗಿದೆ. ರೌಡಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರ ನೈತಿಕ ಸ್ಥೈರ್ಯವನ್ನೇ ಬಿಜೆಪಿ ಕಿತ್ತುಕೊಂಡಿದೆ. “ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು” ಎಂಬಂತಾಗಿದೆ ಎಂದು ಟೀಕಿಸಿದೆ.

Leave a Reply

Your email address will not be published. Required fields are marked *

error: Content is protected !!