ರಾಜ್ಯದ 25 ಜಾತಿಗಳ ಮೀಸಲಾತಿ ಸರ್ಕಾರಕ್ಕೆ ವರದಿ- ಜಯಪ್ರಕಾಶ್ ಹೆಗ್ಡೆ
ಉಡುಪಿ, ಡಿ.3 : ಒಂದು ತಿಂಗಳೊಳಗೆ ರಾಜ್ಯದ 25 ವಿವಿಧ ಜಾತಿಗಳ ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 17 ಜಾತಿ ವರದಿ ಮುದ್ರಿಸಲಾಗಿದ್ದು, ಇನ್ನೂ 8 ಜಾತಿ ವರದಿ ಸಿದ್ಧವಾಗಿವೆ. ಅಲ್ಲದೆ ಕುಡುಬಿ ಜಾತಿಯನ್ನು ಬುಡಕಟ್ಟುವಿಗೆ ಸೇರಿಸಲು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು. ಹಾಗೂ ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ತಾವು ಚುನಾವಣೆ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲ ಅಭಿಮಾನಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ 2023ರ ನವೆಂಬರ್ ವರೆಗೆ ತಮ್ಮ ಅಧಿಕಾರಾವಧಿ ಇದೆ. ಈ ಹುದ್ದೆಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಆಯೋಗದ ಹೊರತಾಗಿಯೂ ತಮ್ಮ ಕೆಲಸಗಳಿಗೆ ಜನರು ಈಗಲೂ ತಮ್ಮ ಬಳಿಗೆ ಬರುತ್ತಾರೆ. ಚುನಾಯಿತ ಪ್ರತಿನಿಧಿಯಾದರೆ ನೇರವಾಗಿ ಜನರ ಕೆಲಸ ಮಾಡಿಕೊಡುವುದಕ್ಕೆ ಅನುಕೂಲವಾಗುತ್ತದೆ ಎಂದರು. ಹಾಗೂ ಪಕ್ಷ ಬಯಸಿದರೆ ತಾವು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಿದ್ಧ ಎಂದು ತಿಳಿಸಿದರು.