ಗಂಗೊಳ್ಳಿ: ಬೋಟ್ ನಿಂದ ನದಿಗೆ ಬಿದ್ದು ಮೀನುಗಾರ ಮೃತ್ಯು
ಗಂಗೊಳ್ಳಿ, ಡಿ.2 : ಬೋಟ್ ನಿಂದ ಮೀನು ಖಾಲಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದು ಒರಿಸ್ಸಾ ಮೂಲದ ಮೀನುಗಾರರೊಬ್ಬರು ಸಾವನ್ನಪ್ಪಿದ ಘಟನೆ ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.
ಒರಿಸ್ಸಾ ಮೂಲದ ಪ್ರಮೋದ್ ಮಿನ್ಜ್ (32) ಮೃತ ಮೀನುಗಾರ
ನ.29 ರಂದು ಪ್ರಭಾಕರ ಖಾರ್ವಿ ಅವರ ಮಾಲಕತ್ವದ ಶ್ರೀ ಯಕ್ಷೇಶ್ವರಿ ಬೋಟ್ನಲ್ಲಿ ಪ್ರಮೋದ್ ಮಿನ್ಜ್ ಅವರು ಇತರ ಮೀನುಗಾರರೊಂದಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಬಂದರು ಬಳಿ ಪಂಚಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ ಬೋಟ್ನಿಂದ ಮೀನು ಖಾಲಿ ಮಾಡುತ್ತಿರುವಾಗ ಪ್ರಮೋದ ಮಿನ್ಜ್ ಅವರು ಆಕಸ್ಮಿಕವಾಗಿ ಆಯತಪ್ಪಿ ಬೋಟ್ನಿಂದ ಪಂಚಗಂಗಾವಳಿ ನದಿಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಈ ವೇಳೆ ನದಿಗೆ ಬಿದ್ದ ಪ್ರಮೋದ್ ಅವರ ಪತ್ತೆಗಾಗಿ ಕಳೆದ ನಾಲ್ಕು ದಿನಗಳಿಂದ ತೀವ್ರ ಹುಡುಕಾಟ ನಡೆಸಲಾಗಿತ್ತು. ಆದರೆ ಇಂದು ಬೆಳಗ್ಗೆ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.